ಹುಬ್ಬಳ್ಳಿ: ‘ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನಲ್ಲಿ ವಿಪ್ಗೆ ಬೆಲೆಯೇ ಇಲ್ಲದಂತಾಗಿದೆ. ಎರಡೆರಡು ಬಾರಿ ವಿಪ್ ಜಾರಿ ಮಾಡಿದರೂ ಆ ಪಕ್ಷದ ಶಾಸಕರು ಬೆಲೆ ನೀಡುತ್ತಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಆರಂಭದಿಂದಲೂ ಸ್ಥಿರತೆ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬುದನ್ನು ಕಾಂಗ್ರೆಸ್ ಶಾಸಕರು ಮಾನಸಿಕವಾಗಿ ಒಪ್ಪಿಕೊಂಡಿಲ್ಲ. ಹೈಕಮಾಂಡ್ ನಿರ್ದೇಶನದಿಂದಾಗಿ ಅನಿವಾರ್ಯವಾಗಿ ಜೆಡಿಎಸ್ ಅನ್ನು ಬೆಂಬಲಿಸಿದ್ದಾರೆ’ ಎಂದರು.
‘ವಿಧಾನಮಂಡಲ ಅಧಿವೇಶನಕ್ಕೆ ಕಾಂಗ್ರೆಸ್ನ 10 ಶಾಸಕರು ಗೈರಾಗಿರುವುದು ಸಮ್ಮಿಶ್ರ ಸರ್ಕಾರದ ಬಗ್ಗೆ ಇರುವ ಅಸಮಾಧಾನಕ್ಕೆ ಸಾಕ್ಷಿಯಾಗಿದೆ. ತಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ‘ಆಪರೇಷನ್ ಕಮಲ’ ಎಂದು ಬಿಜೆಪಿ ಮೇಲೆ ಆಪಾದನೆ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.
ಒತ್ತಾಯ ಪೂರ್ವಕ ಮದುವೆ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಕಾಂಗ್ರೆಸ್, ಜೆಡಿಎಸ್ನದ್ದು ಒತ್ತಾಯ ಪೂರ್ವಕ ಮದುವೆಯಾಗಿದೆ. ನಾವು ಮದುವೆಯಾಗಿ ನಡೆಸಬೇಕಾಗಿದ್ದ ಸಂಸಾರವನ್ನು ಅವರಿಬ್ಬರು ಅಕ್ರಮವಾಗಿ ಸೇರಿಕೊಂಡು ನಡೆಸುತ್ತಿದ್ದಾರೆ. ಈ ಸಂಸಾರ ಬಹಳ ದಿನ ನಡೆಯದು’ ಎಂದರು.