ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭಕ್ಕೆ ಅರ್ಧಚಂದ್ರ!

ಪ್ರಗತಿಪರರ ವಿರೋಧ: ಮಹಿಳೆಯರ ನಿರಾಸಕ್ತಿ
Last Updated 3 ಜನವರಿ 2019, 9:54 IST
ಅಕ್ಷರ ಗಾತ್ರ

ಧಾರವಾಡ:84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ವೇಳೆ 1001 ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆಗೆ ಪ್ರಗತಿಪರರರು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಪೂರ್ಣಕುಂಭ ಹೊತ್ತು ಕಿಲೋಮೀಟರ್‌ ಗಟ್ಟಲೆ ಬರಿಗಾಲಿನಲ್ಲಿ ಸಾಗುವುದಕ್ಕೆ ಮಹಿಳೆಯರೂ ನಿರಾಕರಿಸುತ್ತಿದ್ದಾರೆ.

ಮೆರವಣಿಗೆ ಆರಂಭವಾಗಲಿರುವ ಕರ್ನಾಟಕ ಕಾಲೇಜಿನಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಸುಮಾರು 5 ಕಿ.ಮೀ. ದೂರ ಇದೆ. ಇಷ್ಟು ದೂರ ಕೊಡ ಹೊತ್ತು ಸಾಗುವುದು ಅಸಾಧ್ಯ ಎಂಬ ಅಭಿಪ್ರಾಯ ಕುಂಭ ಮೆರವಣಿಗೆಗೆ ಆಯ್ಕೆಯಾದ ಮಹಿಳೆಯರಿಂದ ವ್ಯಕ್ತವಾಗಿದೆ.

ಸ್ವಸಹಾಯ ಗುಂಪು, ಮಹಿಳಾ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರನ್ನು ಪೂರ್ಣ ಕುಂಭ ಹೊರಲು ಆಯ್ಕೆ ಮಾಡಲಾಗಿದೆ.ಮೆರವಣಿಗೆಯು ಕರ್ನಾಟಕ ಕಾಲೇಜಿನಿಂದ ಆರಂಭಗೊಂಡು, ಆಲೂರು ವೆಂಕಟರಾವ್ ವೃತ್ತ, ಪಾಲಿಕೆ ವೃತ್ತ, ಡಾ. ಆ್ಯನಿಬೆಸೆಂಟ್ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಸಮ್ಮೇಳನ ಜರುಗಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣ ತಲುಪಲಿದೆ.

ಜ. 4ರಂದು ಬೆಳಿಗ್ಗೆ 8ಕ್ಕೆ ಆರಂಭವಾಗುವ ಮೆರವಣಿಗೆಯು ಮುಖ್ಯ ವೇದಿಕೆ ತಲುಪಲು ಕನಿಷ್ಠ 4 ತಾಸು ಬೇಕು. ಅಷ್ಟು ಹೊತ್ತು ನಡೆಯುವುದು ಅಸಾಧ್ಯ. ಹೀಗಾಗಿ, ತಮ್ಮ ಹೆಸರನ್ನು ಕೈಬಿಡುವಂತೆ ಸಾಕಷ್ಟು ಮಹಿಳೆಯರು ಸಮಿತಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪೂರ್ಣಕುಂಭ ಮೆರವಣಿಗೆ ನಡೆಸುವುದಕ್ಕೆ ಈಗಾಗಲೇ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹುಬ್ಬಳ್ಳಿಯ ಚಿಂತನ ವೇದಿಕೆ ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವಿಷಯವಾಗಿ ಪ್ರತಿಕ್ರಿಯಿಸಿರುವ ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ, ‘ಗಣ್ಯರಿಗಾಗಿ ರಸ್ತೆ ಪಕ್ಕದಲ್ಲಿ ಮಕ್ಕಳನ್ನು ಗಂಟೆಗಟ್ಟಲೆ ನಿಲ್ಲಿಸುವುದು, ಒಂದು ಸೀರೆ, ಸ್ಟೀಲ್ ಬಿಂದಿಗೆ ನೀಡಿ ಮಹಿಳೆಯರನ್ನು ಕಿಲೋಮೀಟರ್‌
ಗಟ್ಟಲೆ ನಡೆಸುವುದು ಶೋಷಣೆಯಲ್ಲದೇ ಬೇರೇನೂ ಅಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಮ್ಮೇಳನದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಪ್ರಾತಿನಿಧ್ಯ ನೀಡಬೇಕೆಂದರೆ ಗೋಷ್ಠಿಗಳು, ಚರ್ಚೆಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಲಿ. ಅದನ್ನು ಬಿಟ್ಟು ಸುಮಂಗಲಿಯರು ಮತ್ತು ಅಮಂಗಲಿಯರು ಎಂಬ ಬೇರ್ಪಡಿಸುವ ಮಾನಸಿಕ ಹಿಂಸೆ ನೀಡುವುದು, ಬರಿಗಾಲಿನಲ್ಲಿ ಕೊಡ ಹೊತ್ತು ನಡೆಸುವುದು ಮಹಿಳಾ ಶೋಷಣೆ ಅಲ್ಲವೇ‘ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

‘ಬಲವಂತವಿಲ್ಲ’

‘ಈ ಹಿಂದೆ ರಾಯಚೂರು, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗಿದೆ. ಅಲ್ಲಿ ಯಾರೂ ವಿರೋಧಿಸಿರಲಿಲ್ಲ. ನಮ್ಮಲ್ಲೂ ಎಲ್ಲಾ ವರ್ಗದ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ. ಸ್ವಯಂಪ್ರೇರಣೆಯಿಂದ ಬರುವವರಿಗೆ ಅವಕಾಶ ನೀಡಲಾಗುವುದು. ಸಂಖ್ಯೆ ಕಡಿಮೆಯಾದರೂ ಚಿಂತೆ ಇಲ್ಲ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ತಿಳಿಸಿದರು.

ಮೆರವಣಿಗೆ ಸಾಗುವ ಮಾರ್ಗ 5 ಕಿ.ಮೀ.

ಪೂರ್ಣಕುಂಭ ಹೊರಲು 1001 ಮಹಿಳೆಯರ ನಿಯೋಜನೆ

ಪ್ರಗತಿಪರರು, ಸಾಹಿತಿಗಳ ವಿರೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT