ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ ಘಟಕ ವಿಸ್ತರಣೆ ಬೇಡವೇ ಬೇಡ

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪರಿಸರ ಸಂಘಟನೆಗಳ ಪ್ರಮುಖರ ಹಕ್ಕೊತ್ತಾಯ
Last Updated 14 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಶಿರಸಿ: ಕೈಗಾ ಅಣುಸ್ಥಾವರದಲ್ಲಿ ಪ್ರಸ್ತಾಪಿತ 5–6ನೇ ಘಟಕ ಸ್ಥಾಪನೆ ವಿರೋಧಿಸಿ ವಿವಿಧ ಪರಿಸರ ಸಂಘಟನೆಗಳು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡಿವೆ.

ಈ ಸಂಬಂಧ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ಬೆಂಗಳೂರು ಅವಿನಾಶ ಸಂಸ್ಥೆ ಮುಖ್ಯಸ್ಥ ವೈ.ಬಿ.ರಾಮಕೃಷ್ಣ, ಪರಿಸರ ಬರಹಗಾರ ನಾಗೇಶ ಹೆಗಡೆ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಷ್ಣು ಕಾಮತ್, ಇಂಧನ ತಜ್ಞ ಶಂಕರ ಶರ್ಮಾ, ಪಶ್ಚಿಮಘಟ್ಟ ಉಳಿಸಿ ಆಂದೋಲನದ ಮುಖಂಡ ಪ್ರೊ.ಬಿ.ಎಂ.ಕುಮಾರಸ್ವಾಮಿ, ಸಸ್ಯ ಶಾಸ್ತ್ರಜ್ಞ ಕೇಶವ ಕೊರ್ಸೆ, ಜಿಲ್ಲಾ ಪರಿಸರ ಸಮಿತಿ ಉಪಾಧ್ಯಕ್ಷೆ ವಾಸಂತಿ ಹೆಗಡೆ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖ ನಾರಾಯಣ ಗಡೀಕೈ, ಪರಿಸರ ಕಾನೂನು ಅಧ್ಯಯನ ಕೇಂದ್ರದ ಪ್ರಮುಖ ಡಾ.ಮಹಾಬಲೇಶ್ವರ ಅವರು, ಅಣುಸ್ಥಾವರ ಘಟಕ ವಿಸ್ತರಣೆ ವಿರೋಧಿಸುವ ಕಾರಣಗಳನ್ನು ನೀಡಿ, ಜಂಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

‘* ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಕೈಗಾ ಸುತ್ತಮುತ್ತಲ ಗಾಳಿ, ನೀರು, ಜಲಚರ, ಸಸ್ಯಗಳು ವಿಕಿರಣಯುಕ್ತವಾಗಿದ್ದು, ಅವನ್ನು ಸೇವಿಸುವ ಜನರ ಪರಿಸ್ಥಿತಿ ಏನು ಎಂಬುದರ ಕುರಿತು ನೈಜ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಮುಂಬೈ ಟಾಟಾ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸುತ್ತಿದೆ ಎನ್ನಲಾಗುವ ವರದಿಯನ್ನೂ ಸಾರ್ವಜನಿಕರಿಗೆ ನೀಡಲಾಗುತ್ತಿಲ್ಲ.

* ಕೈಗಾ ಅಣುವಿದ್ಯುತ್ ಘಟಕಗಳು ಕಾಳಿ ನದಿ ನೀರನ್ನು ಬಳಸಿಕೊಂಡು, ಪುನಃ ಆ ನೀರನ್ನು ನದಿಗೆ ಬಿಡುತ್ತವೆ. ವಿಕಿರಣಯುಕ್ತ ಈ ನೀರು ಕಾಳಿ ನದಿಯ ಮತ್ತು ಕಾರವಾರದ ಸಮುದ್ರದಲ್ಲಿ ಸಿಗುವ ಮೀನು, ಏಡಿ, ಸೀಗಡಿ, ಬೆಳಚಿನಂತಹ ಜಲಚರಗಳ ದೇಹವನ್ನು ಸೇರುತ್ತಿವೆ. ಈ ಮೀನನ್ನು ಸೇವಿಸುವ ಜನರ ಆರೋಗ್ಯ ಏನಾಗುತ್ತಿದೆ ಎಂಬ ಕುರಿತು ಯಾರೂ ಮಾಹಿತಿ ನೀಡುತ್ತಿಲ್ಲ.

* ಕೈಗಾ ಪ್ರದೇಶವು ಅಮೂಲ್ಯ ಕಾಡಿರುವ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವೇ ಈ ಪ್ರದೇಶವನ್ನು (ಕೆರವಡಿ, ಕದ್ರಾ, ಮಲ್ಲಾಪುರ, ಕೈಗಾ ಇತ್ಯಾದಿ ಗ್ರಾಮ ಪಂಚಾಯತ ಪ್ರದೇಶ) ಪರಿಸರ ಸೂಕ್ಷ್ಮಪ್ರದೇಶವೆಂದು ಅಧಿಕೃತವಾಗಿ ಘೋಷಿಸಿ ಗೆಜೆಟ್ ಪ್ರಕಟಣೆ ಮಾಡಿದೆ(No.3956 /ಅಕ್ಟೋಬರ್ 4,2018). ಇಂಥ ಸೂಕ್ಷ್ಮ ಪರಿಸರದಲ್ಲಿ ಅಣುವಿದ್ಯುತ್ ಘಟಕ ಸ್ಥಾಪಿಸಿರುವುದೇ ತಪ್ಪು. ಮತ್ತೆ ಮುಂದಿನ ವಿಸ್ತರಣೆ ಬೇಡವೇ ಬೇಡ.

* ಮಳೆ-ಬೆಳೆ ದೃಷ್ಟಿಯಿಂದ ಈ ಜಿಲ್ಲೆಯ ಪರಿಸರದ ಹಿತಕಾಯುವ ಮತ್ತು ಕಾಳಿ ನದಿಗೆ ಸದಾ ನೀರುಣಿಸುವ ಅಣಶಿ ಹುಲಿ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನ, ದಾಂಡೇಲಿ ಅಭಯಾರಣ್ಯ ಇವೆಲ್ಲ ಕೈಗಾ ಪಕ್ಕದಲ್ಲಿಯೇ ಇವೆ. ಇಲ್ಲಿ ಅಪಾರ ಸಂಖ್ಯೆಯ ಅಪರೂಪದ ಸಸ್ಯ-ಪ್ರಾಣಿ ಜೀವವೈವಿಧ್ಯವಿದೆ. ಇವುಗಳ ಮೇಲೆ ಅಣುವಿಕಿರಣ ಉಂಟುಮಾಡುತ್ತಿರುವ ಘೋರ ಪರಿಣಾಮಗಳನ್ನು ಯಾರೂ ಅಧ್ಯಯನ ಮಾಡುತ್ತಿಲ್ಲ ಅಥವಾ ಸಾರ್ವಜನಿಕರಿಗೆ ಹೇಳುತ್ತಿಲ್ಲ.

* ಕದ್ರಾದಿಂದ ಅಪಾರ ಪ್ರಮಾಣದಲ್ಲಿ ಕಾಳಿ ನೀರನ್ನು ಈಗಾಗಲೇ ಕೈಗಾ ಘಟಕಗಳು ಬಳಸುತ್ತಿವೆ. ಹೊಸ ಘಟಕಗಳು ಮತ್ತಷ್ತು ಹೆಚ್ಚು ನೀರನ್ನು ಬಳಸುತ್ತವೆ. ಇದರಿಂದ ಕಾಳಿ ನದಿಯಲ್ಲಿ ನೈಸರ್ಗಿಕ ನೀರಿನ ಹರಿವು ಮತ್ತಷ್ಟು ಕಡಿಮೆಯಾಗುತ್ತದೆ. ಕಾರವಾರದ ಕಡೆಯಿಂದ ಮತ್ತಷ್ಟು ಸಮುದ್ರದ ಉಪ್ಪುನೀರು ಕಾಳಿ ನದಿಯ ಒಳಪ್ರದೇಶಕ್ಕೆ ನುಗ್ಗುವದು. ಇದು ನದಿ ತೀರದ ಎಲ್ಲ ಹಳ್ಳಿಗರ ಬದುಕಿಗೇ ಸಂಕಷ್ಟ ತಂದಿಡಬಲ್ಲದು.

* ಕೈಗಾ ಅಣುವಿದ್ಯುತ್ ಸ್ಥಾವರದಿಂದ ಹೊರಬರುವ ವಿಕಿರಣಯುಕ್ತ ನೀರು ಕಾಳಿ ನದಿ ಸೇರುತ್ತಿದೆ. ಇದು ಇಲ್ಲಿರುವ ಅಸಂಖ್ಯ ಬಗೆಯ ಸಸ್ಯ-ಪ್ರಾಣಿ– ಜಲಚರ –ಜೀವವೈಧ್ಯಗಳ ಮೇಲೆ ಬೀರುವ ಪರಿಣಾಮವನ್ನು ಯಾರೂ ಅರಿಯರು. ಇದರಿಂದ ನದಿ, ದೇವಭಾಗ ಅಳಿವೆ ಪ್ರದೇಶ ಮತ್ತು ಕಾರವಾರದ ಸಮುದ್ರ ನೀರು ವಿಷವಾಗುತ್ತಿದೆ.

* ಈಗಾಗಲೇ ಅಣು ವಿದ್ಯುತ್ತಿಗೆ ಬೇಕಾಗುವ ಯುರೇನಿಯಂ ಅಭಾವ ತಲೆದೋರಿದೆ. ಹೀಗಾಗಿ, ಹಿಂದೊಮ್ಮೆ ಗಣಿಗಾರಿಕೆ ಮಾಡಿದ್ದ ಅರೇಬೈಲ್ ಘಟ್ಟದಲ್ಲಿ ಮತ್ತೊಮ್ಮೆ ಯುರೇನಿಯಂ ಗಣಿಗಾರಿಕೆ ಆರಂಭವಾಗಿ, ಮತ್ತಷ್ಟು ಪರಿಸರ ಸಮಸ್ಯೆಗಳು ತಲೆದೋರಬಹುದು.

* ಕಾಳಿ ನದಿ ಕಣಿವೆಯ ಮೇಲ್ಭಾಗದಲ್ಲಿ ಈಗಾಗಲೇ ಏಳು ದೊಡ್ಡ ಅಣೆಕಟ್ಟುಗಳಿದ್ದು, ಪರಿಸರ ಸೂಕ್ಷ್ಮವಾಗಿದೆ. ಭವಿಷ್ಯದಲ್ಲೇನಾದರೂ ಅಣೆಕಟ್ಟು ಬಿರುಕುಬಿಟ್ಟರೆ ಅಥವಾ ಭೂಕುಸಿತವಾದರೆ ಕದ್ರಾ–ಕೈಗಾ ಪ್ರದೇಶದಲ್ಲಿಯೂ ಭೂಕುಸಿತ, ಪ್ರವಾಹದ ಸಾಧ್ಯತೆಗಳಿವೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT