ರಾಮನಗರ: ಇಲ್ಲಿನ ಜೈಲಿನಲ್ಲಿ ಇರುವ ಪಾದರಾಯನಪುರ ದಾಂಧಲೆ ಪ್ರಕರಣದ ಆರೋಪಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಮಳೆ ಅಡ್ಡಿಯಾಗಿದೆ.ಸದ್ಯ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿರುವ ಕಾರಣ ವಾತಾವರಣ ನೋಡಿಕೊಂಡು, ಮಧ್ಯಾಹ್ನದ ಬಳಿಕ ಸ್ಥಳಾಂತರಿಸಲುಅಧಿಕಾರಿಗಳು ತೀರ್ಮಾನಿಸಿದ್ದಾರೆ.
ರಾಮನಗರ ಡಿಪೊದಿಂದ ಬಂದಿದ್ದ 14 ಬಸ್ ಗಳನ್ನು ವಾಪಸ್ ಡಿಪೊಗೆ ಕಳುಹಿಸಲಾಗಿದೆ.ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಇರುವ 119 ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ಸ್ಥಳಾಂತರ ಮಾಡಲು ಸಿದ್ಧತೆ ನಡೆಸಲಾಗಿತ್ತು.
ಬೆಂಗಳೂರಿನ ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ 121 ಆರೋಪಿಗಳನ್ನು ರಾಮನಗರ ಜೈಲಿಗೆ ಇದೇ 21ರಂದು ಸ್ಥಳಾಂತರ ಮಾಡಲಾಗಿತ್ತು. ಅವರಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಂಕಿತರಿಬ್ಬರನ್ನು ಗುರುವಾರ ರಾತ್ರಿಯೇ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ.
ಉಳಿದವರನ್ನೂ ಹಜ್ ಭವನಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಕೆಎಸ್ ಆರ್ ಟಿಸಿ ರಾಮನಗರ ಘಟಕದ 14 ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಸ್ ಗಳು ಈಗಾಗಲೇ ಕಾರಾಗೃಹದ ಮುಂಭಾಗ ನಿಲ್ಲಿಸಲಾಗಿತ್ತು.