ಏಳು ವರ್ಷದವಳಾಗಿದ್ದಾಗಲೇ ಪಡಿಯಮ್ಮ ಅವರಿಗೆ ‘ಮುತ್ತು’ ಕಟ್ಟಿಸಿ ದೇವದಾಸಿ ಪಟ್ಟಕಟ್ಟಲಾಯಿತು. ನಂತರ ಆಕೆ ದುಡಿಯಲು ಗೋವಾಕ್ಕೆ ಗುಳೆ ಹೋದರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರು. ಪುತ್ರರು ಅಕಾಲಿಕವಾಗಿ ಮೃತಪಟ್ಟರು. ಎದೆಗುಂದದ ಪಡಿಯಮ್ಮ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಭಾರವನ್ನು ತಾವೇ ಹೊತ್ತುಕೊಂಡಿದ್ದಾರೆ. ಪಿತ್ರಾರ್ಜಿತವಾದ ಆರು ಎಕರೆ ಹೊಲದಲ್ಲಿ ಕೃಷಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜ ಕಲಿಸಿದ ಪಾಠ, ಹೋರಾಟದಿಂದ ಪಡೆದ ಅನುಭವ, ಮಾನವೀಯತೆಯೇ ಪಡಿಯಮ್ಮನವರ ದೊಡ್ಡ ಆಸ್ತಿ. ಅವುಗಳಿಂದ ಆತ್ಮವಿಶ್ವಾಸ ಹೆಚ್ಚಾಗಿದೆ ಎನ್ನುತ್ತಾರೆ.