ಬೆಂಗಳೂರು: ಮೈತ್ರಿ ಸರ್ಕಾರದಕಾಂಗ್ರೆಸ್ ನಾಯಕರಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದ್ದಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ ಅವರ ಬಳಿಯಿದ್ದ ಗೃಹ ಖಾತೆ ನೂತನ ಸಚಿವ ಎಂ.ಬಿ. ಪಾಟೀಲರ ಪಾಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಮೇಲಾಗಿದೆ.
ಏಳು ತಿಂಗಳ ಹಿಂದೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದವರು ತಮ್ಮ ಬಳಿಯಿರುವ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ಹಿಂದೇಟು ಹಾಕಿದ್ದರು. ಕಳೆದ ವಾರ ಸಂಪುಟ ಸೇರಿದ ಸಚಿವರೂ ಆಯಕಟ್ಟಿನ ಖಾತೆಗಳಿಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪ್ರಮಾಣವಚನ ಸ್ವೀಕರಿಸಿ 6–7 ದಿನ ಕಳೆದರೂ ಎಂಟು ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿರಲಿಲ್ಲ.
ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ಸಭೆ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬೇಕಿರುವುದರಿಂದ ಹೊಸ ಸಚಿವರಿಗೆ ಪ್ರಮುಖ ಖಾತೆಯನ್ನು ಬಿಟ್ಟುಕೊಡುವುದು ಅನಿವಾರ್ಯ ಎಂದು ವೇಣುಗೋಪಾಲ್ ಪ್ರತಿಪಾದಿಸಿದ್ದರು.ಆದರೆ ನಾಯಕರಲ್ಲಿ ಒಮ್ಮತ ಮೂಡಿರಲಿಲ್ಲ.
ಉಪಮುಖ್ಯಮಂತ್ರಿ ಪರಮೇಶ್ವರ ತಮ್ಮ ಬಳಿಯಿರುವ ಗೃಹ ಖಾತೆಯನ್ನು ಹಾಗೂ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ವೈದ್ಯಕೀಯ ಶಿಕ್ಷಣ ಖಾತೆ ಬಿಟ್ಟುಕೊಡಲು ಒಪ್ಪಿರಲಿಲ್ಲ. ಆದರೆಈ ಎರಡೂ ಖಾತೆಗಳನ್ನು ಕ್ರಮವಾಗಿ ಎಂ.ಬಿ. ಪಾಟೀಲ ಹಾಗೂ ಇ. ತುಕಾರಾಂ ಅವರಿಗೆ ವಹಿಸುವುದು ವರಿಷ್ಠರ ಅಪೇಕ್ಷೆಯಾಗಿತ್ತು. ಇದಕ್ಕೆಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಧ್ವನಿಗೂಡಿಸಿದ್ದರು. ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗನ್ನು ನಿವಾರಿಸಲು, ಎಂ.ಬಿ. ಪಾಟೀಲರಿಗೆ ಗೃಹ ಖಾತೆ ವಹಿಸಬೇಕು ಹಾಗೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕೊಡುಗೆ ನೀಡಿರುವ ಬಳ್ಳಾರಿಗೆ ಪ್ರಮುಖ ಖಾತೆ ನೀಡಬೇಕು ಎಂಬ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ತುಕಾರಾಂಗೆ ನೀಡಬೇಕು ಎಂದು ಹಟ ಹಿಡಿದಿದ್ದರು.
ಒಮ್ಮತ ಮೂಡದ ಕಾರಣಸಭೆಯನ್ನು ಮುಕ್ತಾಯಗೊಳಿಸಿದ್ದ ವೇಣಗೋಪಾಲ್, ‘ರಾಹುಲ್ ಗಾಂಧಿ ಅವರೇ ಇತ್ಯರ್ಥ ಪಡಿಸುತ್ತಾರೆ. ಹೈಕಮಾಂಡ್ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು’ ಎಂದಿದ್ದರು.
ಇದೀಗ ಖಾತೆ ಮರು ಹಂಚಿಕೆಯಿಂದಾಗಿ ಪರಮೇಶ್ವರ ಅವರ ಬಳಿಯಿದ್ದ ಗೃಹಖಾತೆ ಎಂ.ಬಿ. ಪಾಟೀಲ ಕೈಸೇರಿದೆ. ವೈದ್ಯ ಶಿಕ್ಷಣ ಖಾತೆ ಡಿ.ಕೆ.ಶಿವಕುಮಾರ್ ಕೈಯಿಂದ ಜಾರಿದ್ದು ಇ. ತುಕಾರಾಂ ಅವರಿಗೆ ಒಲಿದಿದೆ.
ಖಾತೆ ಹಂಚಿಕೆ ವಿವರ
ಜಿ. ಪರಮೇಶ್ವರ
ನಗರಾಭಿವೃದ್ಧಿ
ಕಾನೂನು ಮತ್ತು ನ್ಯಾಯ ಹಾಗೂ ಮಾನವ ಹಕ್ಕು
ಸಂಸದೀಯ ವ್ಯವಹಾರ, ಐಟಿ ಬಿಟಿ
ಡಿ.ಕೆ.ಶಿವಕುಮಾರ್
ಜಲಸಂಪನ್ಮೂಲ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಎಂ.ಬಿ. ಪಾಟೀಲ
ಗೃಹ
ಆರ್.ವಿ.ದೇಶಪಾಂಡೆ
ಕಂದಾಯ ಇಲಾಖೆ
ಕೆ.ಜೆ. ಜಾರ್ಜ್
ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ಕೃಷ್ಣ ಭೈರೇಗೌಡ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಯು.ಟಿ.ಖಾದರ್
ನಗರಪಾಲಿಕೆ(ಬಿಬಿಎಂಪಿ ಹೊರತುಪಡಿಸಿ)
ಜಯಮಾಲಾ
ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಸತೀಶ್ ಜಾರಕಿಹೊಳಿ
ಪರಿಸರ ಮತ್ತು ಅರಣ್ಯ
ಸಿ.ಎಸ್.ಶಿವಳ್ಳಿ
ಪೌರಾಡಳಿತ
ಎಂಟಿಬಿ ನಾಗರಾಜ್
ವಸತಿ
ಇ. ತುಕಾರಾಂ
ವೈದ್ಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ
ಎನ್.ಎಚ್. ಶಿವಶಂಕರ್ ರೆಡ್ಡಿ
ಕೃಷಿ
ಪ್ರಿಯಾಂಕ್ ಖರ್ಗೆ
ಸಮಾಜ ಕಲ್ಯಾಣ
ಜಮೀರ್ ಅಹ್ಮದ್ಖಾನ್
ಆಹಾರ ಮತ್ತು ನಾಗರಿಕ ಸರಬರಾಜು
ಅಲ್ಪ ಸಂಖ್ಯಾತ ಕಲ್ಯಾಣ ಮತ್ತು ವಕ್ಫ್
ಶಿವಾನಂದ ಎನ್ ಪಾಟೀಲ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ
ಕಾರ್ಮಿಕ
ರಾಜಶೇಖರ ಬಿ.ಪಾಟೀಲ್
ಗಣಿ ಮತ್ತು ಕಲ್ಲಿದ್ದಲು
ಸಿ.ಪುಟ್ಟರಂಗ ಶೆಟ್ಟಿ
ಹಿಂದುಳಿದ ವರ್ಗಗಳ ಕಲ್ಯಾಣ
ಪಿ.ಟಿ. ಪರಮೇಶ್ವರ ನಾಯ್ಕ
ಮುಜರಾಯಿ
ಕೌಶಲ್ಯಾಭಿವೃದ್ಧಿ
ರಹಿಂ ಖಾನ್
ಯುವಜನ ಸಬಲೀಕರಣ ಮತ್ತು ಕ್ರೀಡೆ
ಆರ್.ಬಿ.ತಿಮ್ಮಾಪೂರ್
ಬಂದರು ಮತ್ತು ಒಳನಾಡು ಸಾರಿಗೆ
ಸಕ್ಕರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.