ಧಾರವಾಡ : ‘ದಿನೇ ದಿನೇ ಬಹುತ್ವ ಭಾರತ ಅಳಿಸಿ. ಹಿಂದೂತ್ವ ಭಾರತ ಮುನ್ನೆಲೆಗೆ ಬರುತ್ತಿದೆ. ಈ ಸನ್ನಿವೇಶದಲ್ಲಿ ಬಹುತ್ವ ಭಾರತ ಎಂಬ ಪರಿಕಲ್ಪನೆ ಮೇಲೆ ಸಾಹಿತ್ಯ ಮೇಳ ನಡೆಸುತ್ತಿರುವುದು ಅತ್ಯಂತ ಮಹತ್ವವಾಗಿದೆ’ ಎಂದು ಸಾಹಿತಿ ಓಲ್ಗಾ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ "ಬಹುತ್ವ ಭಾರತ" ಎಂಬ ಘೋಷದೊಂದಿಗೆ ಹಮ್ಮಿಕೊಂಡಿರುವ ‘ಮೇ ಸಾಹಿತ್ಯ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತ ಎಂಬುದೇ ಒಂದು ಮೂಲತಃ ಬಹುವಚನದ ಪರಿಕಲ್ಪನೆ. ನೇಷನ್ ಎಂಬ ಪದಕ್ಕೆ ಯಾವುದೇ ಭಾಷೆಯಲ್ಲಿಯೂ ಸಮನಾರ್ಥ ಪದವಿಲ್ಲ. ನೇಷನ್ ಎಂಬ ಪತಿಕಲ್ಪನೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಳಕೆಗೆ ಬಂದಿತು’ ಎಂದರು.
‘ಇಂದಿನ ಸೃಜನಶೀಲ ಬರಹಗಾರರು ರಾಷ್ಟ್ರೀಯವಾದಿಗಳ ಹಾಗೂ ದೇಶಭಕ್ತರ ಮೂಲಕ ಅಪಾಯವನ್ನು ಎದುರಿಸುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಮ್ಮ ಧಾರ್ಮಿಕ ಸಿದ್ದಾಂತಗಳನ್ನು ಒಪ್ಪದ ಇತರ ಧರ್ಮಿಯರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವ ಅಪಾಯಕಾರಿ ಬೆಳವಣಿಗೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆತಂಕಗೊಳಿಸಿದೆ. ಈ ಕಾರಾಣಕ್ಕಾಗಿಯೇ ಸ್ವಾತಂತ್ರ್ಯ ಪೂರ್ವದಲ್ಲಿನ ಬಹುತ್ವ ಭಾರತ ಇದೀಗ ಹಿಂದೂತ್ವ ಭಾರತವಾಗಿ ಬದಲಾಗಿದೆ’ ಎಂದು ತಿಳಿಸಿದರು.
‘ಭಾರತೀಯ ಜನತಾ ಪಕ್ಷದ ಮೋದಿ ಹಾಗೂ ಅಮಿತ್ ಶಾ ಅವರು ಅಪರಾಧ ಕೃತ್ಯಗಳನ್ನೇ ಮಾಡುವವರು. ಅವರು ಸದ್ದಿಲ್ಲದೇ ರಾಷ್ಟ್ರದಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.
‘ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ನಮ್ಮೆಲ್ಲರ ಸಂವಿಧಾನಬದ್ಧ ಹಕ್ಕು. ಈ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿವೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.