ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಹಸ್ತಾಂತರಕ್ಕೆ ಪಕ್ಷಾಂತರ ಮಾಡುವುದು ತಪ್ಪು: ಡಿ.ಕೆ. ಶಿವಕುಮಾರ್

ಪಕ್ಷಾಂತರ ನಿಷೇಧ ಕಾಯ್ದೆ ಕುರಿತ ಸಂಸದೀಯ ಸಭೆ
Last Updated 28 ಮೇ 2020, 10:44 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದು, ಪಕ್ಷಾಂತರ ಮಾಡಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ವಾಪಸ್ ತೆಗೆದುಕೊಳ್ಳುವುದು, ಒಂದು ಪಕ್ಷದಲ್ಲಿದ್ದು, ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ರಾಜೀನಾಮೆ ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಯಾರು ಗೆಲ್ಲುತ್ತಾರೋ ಅವರು ಅಧಿಕಾರ ಪಡೆಯಲಿ, ಆದರೆ ಅಧಿಕಾರ ಹಸ್ತಾಂತರಕ್ಕೆ ಪಕ್ಷಾಂತರ ಮಾಡುವುದು ವ್ಯವಸ್ಥೆಗೆ ವಿರುದ್ಧವಾದುದು. ಇದಕ್ಕೆ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಅಭಿಪ್ರಾಯ ಸಂಗ್ರಹಿಸಲು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಅವರು ಮಾತನಾಡಿದರು.

‘ಸದ್ಯ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ರಾಷ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಎಲ್ಲ ಪಕ್ಷಕ್ಕೂ ಬಂದಿರುವ ದೊಡ್ಡ ಕಾಯಿಲೆ. ಇದನ್ನು ಈಗ ಬಗೆಹರಿಸದಿದ್ದರೇ ಇಡೀ ಪ್ರಜಾತಂತ್ರ ವ್ಯವಸ್ಥೆಯೇ ಹದಗೆಡಲಿದೆ. ಇದಕ್ಕೆ ನಮ್ಮ ರಾಜ್ಯವೇ ದೊಡ್ಡ ಸಾಕ್ಷಿಯಾಗಿದೆ. ಬದಲಾವಣೆ ತರಲು ನಾವೆಷ್ಟೇ ಪ್ರಯತ್ನ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಈ ಪಕ್ಷಾಂತರ ವಿಚಾರಕ್ಕೆ ನಾವೆಲ್ಲರೂ ಕಾರಣಕರ್ತರಾಗಿದ್ದೇವೆ.’

‘ಬೊಮ್ಮಾಯಿ ಅವರ ಪ್ರಕರಣದ ತೀರ್ಪು, ರಮೇಶ್ ಕುಮಾರ್ ಅವರ ತೀರ್ಪು, ಗೋವಾ, ಒಡಿಶಾ, ಮಣಿಪುರ, ನಾಗಾಲೆಂಡ್ ತೀರ್ಪುಗಳ ಬಗ್ಗೆ ದೊಡ್ಡ ಚರ್ಚೆ ಆಗಿದೆ. ನಾವಷ್ಟೇ ಚರ್ಚೆ ಮಾಡಿದರೆ ಸಾಲದು. ನೀವು ವಿಧಾನ ಪರಿಷತ್ ಸಭಾಪತಿಗಳನ್ನು ಒಳಗೊಂಡಂತೆ ಅಲ್ಲಿನ ಸದಸ್ಯರುಗಳ ಜತೆಯೂ ಒಂದು ಸಭೆ ನಡೆಸಬೇಕಿದೆ. ಇಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನ ಅವರಿಗೂ ಅನ್ವಯಿಸುತ್ತದೆ. ಹೀಗಾಗಿ ಈ ವಿಚಾರದಲ್ಲಿ ಅವರನ್ನು ನಾವು ಕಡೆಗಣಿಸಲು ಆಗುವುದಿಲ್ಲ. ಇದು ವ್ಯವಸ್ಥೆಯ ಭಾಗವಾಗಿದೆ.’

‘ಸ್ಪೀಕರ್ ಕುರ್ಚಿಯು ನ್ಯಾಯಾಧೀಶರ ಸ್ಥಾನದಂತೆ. ಆ ಸ್ಥಾನದಲ್ಲಿ ಕೂರುವವರು ಯಾವುದೇ ಪಕ್ಷದಿಂದ ಆಯ್ಕೆಯಾದರೂ ಅವರಿಗೆ ಇರುವ ಅಧಿಕಾರವನ್ನು ಬಳಸಲು ಅವಕಾಶ ನೀಡಬೇಕು.’

ಸಭೆ ನಂತರ ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಮುಖ್ಯಾಂಶಗಳು...

* ಪಕ್ಷಾಂತರ ವಿಚಾರವಾಗಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು, ಸಲಹೆಗಳು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಆಗುತ್ತಿರುವ ಚರ್ಚೆ ಅಭಿಪ್ರಾಯಗಳ ಬಗ್ಗೆ ಸಮಿತಿ ರಚನೆಯಾಗಿ ನಮ್ಮ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿರಲಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಕಾಗೇರಿ ಅವರು ಯಾಕೆ ಅವರನ್ನು ಪರಿಗಣಿಸಿಲ್ಲವೊ ಗೊತ್ತಿಲ್ಲ. ಅವರೂ ಕೂಡ ಶಾಸಕರಂತೆ ಪ್ರತಿನಿಧಿಗಳಾಗಿದ್ದು, ಅವರ ಅಭಿಪ್ರಾಯ ಪರಿಗಣಿಸಬೇಕು.

* ತಮಗ ಅಧಿಕಾರದ ಅವಧಿಯಲ್ಲಿ ಶಾಸಕರು ತಮ್ಮ ವೈಯಕ್ತಿಕ ವಿಚಾರಕ್ಕೆ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು ಪಕ್ಷದ ವಿರುದ್ಧ ಬೇರೆ ಪಕ್ಷಕ್ಕೆ ಹೋಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಅಂತಾ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಈ ವಿಚಾರವಾಗಿ ನಮ್ಮ ಪಕ್ಷಗಳಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. 10ನೇ ತಾರೀಕಿನೊಳಗೆ ಪಕ್ಷದ ಹಿರಿಯ, ಕಿರಿಯ ಹಾಗೂ ತಜ್ಞರನ್ನು ಕೇಳಿ ಅವರ ಅಭಿಪ್ರಾಯ ತೆಗೆದುಕೊಂಡು ಒಂದು ಪಕ್ಷವಾಗಿ ಅಭಿಪ್ರಾಯ ನೀಡಲಿದ್ದೇವೆ.

* ಪಂಚಾಯತಿಗಳಲ್ಲಿ ಚುನಾವಣೆ ಇಲ್ಲದೇ ನಾಮನಿರ್ದೇಶನ ಮಾಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿರುವ ಬಗ್ಗೆ ನಾವೆಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಾವು ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸಬೇಕು ಅಂತಾ ಆಗ್ರಹಿಸುತ್ತಿದ್ದೇವೆ. ನಾಮನಿರ್ದೇಶನಕ್ಕೆ ಅವಕಾಶ ನೀಡಬಾರದು ಅಂತಾ ಕಾನೂನು ಹಾಗೂ ರಾಜಕಾರಣದ ಹೋರಾಟ ಮಾಡಲಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡುವ ತೀರ್ಮಾನ ನಿಮಗೂ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ನಾನು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡಲು ಬಯಸುತ್ತೇನೆ. ನೀವು ಚುನಾವಣೆ ನಡೆಸಿ, ಅದನ್ನು ಬಿಟ್ಟು ನಾಮನಿರ್ದೇಶನ ಮಾಡಿದರೆ ಪಂಚಾಯತ್ ರಾಜ್ ವ್ಯವಸ್ಥೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ.

*ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ಅವರಿಗೆ ಆಹಾರ ಕಿಟ್ ಸಿಕ್ಕಿಲ್ಲ. ಅವರಿಗೆ ಉದ್ಯೋಗವಿಲ್ಲ, ಆಹಾರವಿಲ್ಲ. ಅವರು ತಮ್ಮ ಊರುಗಳಿಗೆ ಹೋಗಲು ಹೆಚ್ಚೆಂದರೆ ಪ್ರತಿ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ನೀಡಲು ಸರ್ಕಾರ ಸಿದ್ಧವಿಲ್ಲ.*ದೇಶ ಕಟ್ಟುತ್ತಿರುವ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ನಡೆಸಿಕೊಳ್ಳಬಾರದು. ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕು. ಸಂಕಷ್ಟದ ಸಮಯದಲ್ಲಿ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿತ್ತು. ಆದರೆ ಅದು ಸಾಧ್ಯವಿಲ್ಲ. ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಇವರಿಗಾಗಿ 7 ಲಕ್ಷ ಆಹಾರ ಕಿಟ್ ತಯಾರಿಸಲಾಗಿದ್ದು, ಅವೆಲ್ಲವೂ ಬಿಜೆಪಿ ಕಾರ್ಯಕರ್ತರಿಗೆ ಹೋಗಿದೆಯೇ ಹೊರತು ಶೇ.10 ರಷ್ಟೂ ಕಾರ್ಮಿಕರಿಗೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT