ಉಡುಪಿ: ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ 31ನೇ ಯತಿಗಳ ಪಟ್ಟಾಭಿಷೇಕ ಮಹೋತ್ಸವ ಭಾನುವಾರ ಶ್ರೀಕೃಷ್ಣ ಮಠದಲ್ಲಿ ನೆರವೇರಿತು. ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಮಠದ ಮುಂದಿನ ಉತ್ತರಾಧಿಕಾರಿಯನ್ನಾಗಿ ವಿದ್ಯಾ ರಾಜೇಶ್ವರ ತೀರ್ಥರನ್ನು ನೇಮಿಸಿ ಪಟ್ಟಾಭಿಷೇಕ ಮಾಡಿದರು.
ಈ ಸಂದರ್ಭ ಅಷ್ಠಮಠಗಳ ಯತಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ 12.20ಕ್ಕೆ ಸರ್ವಜ್ಞ ಪೀಠದಲ್ಲಿ ಕುಳಿತ ಪರ್ಯಾಯ ಶ್ರೀಗಳು ಉತ್ತರಾಧಿಕಾರಿಯ ಹೆಸರನ್ನು ನಾಮಕರಣ ಮಾಡಿ ಘೋಷಿಸುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಬಳಿಕ ಪಲಿಮಾರು ಮಠದ ಹಿರಿಯ ಯತಿಗಳು, ಕಿರಿಯ ಯತಿಗಳನ್ನು ಶ್ರೀಕೃಷ್ಣನ ಗರ್ಭಗುಡಿಗೆ ಕರೆದೊಯ್ದು ಮಂಗಳಾರತಿ ಮಾಡಿಸಿ ಪ್ರಥಮ ಪೂಜೆ ನೇರವೇರಿಸಿದರು. ಈ ಮೂಲಕ ಅಧಿಕೃತವಾಗಿ ಕೃಷ್ಣ ಪೂಜೆಯ ಅಧಿಕಾರವನ್ನು ನೀಡಲಾಯಿತು.
ಪಟ್ಟಾಭಿಷೇಕದ ಪೂರ್ವಭಾವಿಯಾಗಿ ತತ್ವ ಹೋಮ, ಅಷ್ಟಮಹಾಮಂತ್ರ ಹೋಮ ಹಾಗೂ ಮಂಗಲಾಷ್ಟಕದ ಸಾಮೂಹಿಕ ಪಠಣ ನಡೆಯಿತು. ಪಲಿಮಾರು ಮಠದ ಉಭಯ ಯತಿಗಳು, ಅಷ್ಠಮಠದ ಯತಿಗಳಿಗೆ ದಂಡ ಪ್ರಣಾಮ ಮಾಡಿದರು. ತತ್ವಕಲಶಾಭಿಷೇಕ ನೇರವೇರಿದ ಬಳಿಕ ನಾಮಕರಣ ನಡೆಯಿತು.