ರಾಜ್ಯದ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಸ್ವಾಯುತ್ತ ಸಂಸ್ಥೆ, ನಿಗಮ, ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರಿಗೆ ಲಾಕ್ಡೌನ್ ಅವಧಿಯ ವೇತನ ತಡೆಹಿಡಿಯುವಂತಿಲ್ಲ ಎಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಆರ್ಥಿಕ ಇಲಾಖೆಯಉಪ ಕಾರ್ಯದರ್ಶಿ ಎಚ್.ಎ.ಶೋಭಾಸುತ್ತೋಲೆ ಹೊರಡಿಸಿದ್ದಾರೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿಲಾಕ್ಡೌನ್ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಕೆಲವರಿಗೆ ನೌಕರರಿಗೆ ಕೆಲಸಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಇದೇ ಕಾರಣಕ್ಕೆ ಕೆಲವು ಇಲಾಖೆಗಳಲ್ಲಿ ಗೈರು ಹಾಜರಿ ಅವಧಿಯಲ್ಲಿ ವೇತನ ಪಾವತಿ ನಿರಾಕರಿಸಲಾಗಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರವು ಇದೀಗ ಸುತ್ತೋಲೆ ಹೊರಡಿಸಿ, 'ಕೇಂದ್ರ ಸರ್ಕಾರದ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ ವೇತನ ತಡೆ ಹಿಡಿಯದೇ ಪಾವತಿಸಬೇಕು' ಎಂದು ನಿರ್ದೇಶನ ನೀಡಿದೆ.
ರಾಜ್ಯದ ವಿವಿಧೆಡೆ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.