ಬೆಂಗಳೂರು:ಬಿಎಂಟಿಸಿಗೆ 356, ಕೆಎಸ್ಆರ್ಟಿಸಿಗೆ 558, ಈಶಾನ್ಯ ಸಾರಿಗೆ 226 ಮತ್ತು ಇತರ ವಿಭಾಗಗಳಿಗೆ 60 ಸೇರಿ ಒಟ್ಟು 1,200 ಬಸ್ಗಳ ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷಣ ಸವದಿ ತಿಳಿಸಿದರು.
3,000 ಬಸ್ ಖರೀದಿಗೆ ಉದ್ದೇಶಿಸಲಾಗಿತ್ತು. ಆದರೆ, ಮಾರ್ಚ್ ಒಳಗೆ ಅಷ್ಟು ಬಸ್ಗಳನ್ನು ಖರೀದಿಸುವುದು ಕಷ್ಟ ಎಂದು ಬಸ್ ತಯಾರಿಕಾ ಕಂಪನಿಗಳು ತಿಳಿಸಿದವು ಎಂದು ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಸಮಿತಿ ರಚನೆಗೆ ಮುಖ್ಯಮಂತ್ರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬಿಎಂಟಿಸಿ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಮುಂದಿಟ್ಟಿರುವ ಬೇಡಿಕೆಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಹೇಳಿದರು.
‘ಇವೆರಡೂ ಸಂಸ್ಥೆಗಳಲ್ಲಿ ಒಟ್ಟು 1.30 ಲಕ್ಷ ಚಾಲಕರು, ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರು ಎಂದು ಪರಿಗಣಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ನಿಗಮಗಳ ನೌಕರರೂ ಇದೇ ಬೇಡಿಕೆ ಮುಂದಿಡಬಹುದು. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದು ಕೊಳ್ಳಲು ಸಮಿತಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.