ಬೆಂಗಳೂರು: ಪೊಲೀಸರ ವಾರ್ಷಿಕ ಸಾಂದರ್ಭಿಕ ರಜೆ ಕಡಿತಗೊಳಿಸಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಈ ಹಿಂದಿನ ಮೈತ್ರಿ ಸರ್ಕಾರ ಪೊಲೀಸರನ್ನೂ ಇತರ ಸರ್ಕಾರಿ ನೌಕರರಂತೆ ಪರಿಗಣಿಸಿದೆ. ಆ ಮೂಲಕ ಪೊಲೀಸರ ಪಾಲಿನ ಹಿತಶತ್ರುವಿನಂತೆ ವರ್ತಿಸಿದೆ. ಮೈತ್ರಿ ಸರ್ಕಾರದ ಆದೇಶವನ್ನು ನೀವು ಬದಲಿಸಬೇಕು’ ಎಂದು ಸಚಿವರಲ್ಲಿ ಅವರು ಒತ್ತಾಯಿಸಿದ್ದಾರೆ.