ಬೆಂಗಳೂರು: ಪೊಲೀಸ್ ಇಲಾಖೆಯ ಕೆಲವು ವರ್ಗದ ಹುದ್ದೆಗಳ ವೇತನವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಸುತ್ತೋಲೆ ಹೊರಡಿಸಿದೆ.
ವೇತನ ಪರಿಷ್ಕರಣೆ ಆಗಸ್ಟ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಸೇವಾ ಹಿರಿತನದ ಆಧಾರದಲ್ಲಿ ವೇತನ ಪರಿಷ್ಕರಿಸಲಾಗಿದೆ. ಈ ಮೊದಲು ವೇತನ ಶ್ರೇಣಿ ಏರಿಕೆಆಗಿದ್ದರೂ, ಕೆಲವು ಗೊಂದಲಗಳಿಂದಾಗಿ ಅಧಿಕೃತ ಸುತ್ತೋಲೆ ಹೊರಡಿಸಲು ವಿಳಂಬ ಮಾಡಲಾಗಿತ್ತು.
ಸರ್ಕಾರದ ಆದೇಶದನ್ವಯ ನಿಗದಿಪಡಿಸಿದಂತೆ ಹೊಸ ವೇತನದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪರಿಷ್ಕೃತ ವೇತನವನ್ನು ಈ ತಿಂಗಳ ವೇತನದಲ್ಲಿ ಸೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮೊದಲ ವೇತನ ಪರಿಷ್ಕರಣೆ ಪಟ್ಟಿಯಲ್ಲಿ ಎಸ್ಐ, ಎಸಿಪಿ ದರ್ಜೆ ಅಧಿಕಾರಿಗಳು ಅಗ್ನಿಶಾಮಕ ದಳ ಹಾಗೂ ಬಂದೀಖಾನೆ ಸಿಬ್ಬಂದಿ ಕೈಬಿಟ್ಟಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಪೊಲೀಸರ ವೇತನ ಪರಿಷ್ಕರಣೆಗೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ, ಪೊಲೀಸ್ ಮಹಾನಿರ್ದೇಶಕಿ ಎನ್. ನೀಲಮಣಿರಾಜು ಹೊರಡಿಸಿರುವ ಆದೇಶದಲ್ಲಿ ರಾಜ್ಯದ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
* ಎಸ್ಐ, ಎಸಿಪಿ ದರ್ಜೆ ಅಧಿಕಾರಿಗಳು, ಅಗ್ನಿಶಾಮಕ ದಳ, ಬಂದೀಖಾನೆ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ