ಕೆ.ಆರ್.ಪುರ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂದು ನನ್ನ ತಂದೆ ಎ.ಕೃಷ್ಣಪ್ಪ ಅವರಿಗೆ ಮೋಸ ಮಾಡಿದ್ದರು. ಇಂದು ನನ್ನ ತಂದೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಿಡಿಕಾರಿದರು.
ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನನ್ನ ತಂದೆಯನ್ನು ತುಳಿದರು. ಹಿಂದುಳಿದ ಸಮುದಾಯದ ನಾಯಕರಾದ ಕಾರಣಕ್ಕೆ ಟಿಕೆಟ್ ತಪ್ಪಿಸಿದರು. ನಿಜವಾದ ಕಾಳಜಿ ಇದ್ದಿದ್ದರೆ ಬೈರತಿ ಬಸವರಾಜು ಅವರಿಗೆ ಬುದ್ಧಿ ಹೇಳಬಹುದಿತ್ತು. ಬಸವರಾಜು ಅವತ್ತು ಸಿದ್ದರಾಮಯ್ಯ ಹಾಕಿದ ಗೆರೆ ದಾಟುತ್ತಿರಲ್ಲಿಲ್ಲ’ ಎಂದರು.
ಬೈರತಿ ಬಸವರಾಜು ಮಾತನಾಡಿ, ‘ಎ ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿದ್ದು ಯಾರು ಎಂಬುದನ್ನು ಸಿದ್ದರಾಮಯ್ಯನವರೇ ಹೇಳಬೇಕು. ಸಿದ್ದರಾಮಯ್ಯ ನಮ್ಮ ಕೈ ಹಿಡಿಯಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಪಕ್ಷ ತ್ಯಜಿಸಿದ್ದೇನೆ’ ಎಂದರು.