ಹುಬ್ಬಳ್ಳಿ: ಡಿ.ಕೆ. ಶಿವಕುಮಾರ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದ ವಿಚಾರವನ್ನು ಅವರು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಹಾಗೂ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ; ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಶಿವಕುಮಾರ್ ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ಇ.ಡಿ. ಮುಂದೆ ಹಾಜರಾಗಲು ಅವರಿಗೆ ಏನು ಸಮಸ್ಯೆ; ಅವರ ಬಳಿ ಅಷ್ಟೊಂದು ಹಣ ಎಲ್ಲಿಂದ ಬಂತು, ಅವರು ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರೂ ನೋಡುತ್ತಿದ್ದಾರೆ’ ಎಂದರು.
‘ಅಧಿಕಾರ ಇದ್ದಾಗ ಜನರ ಬಳಿಗೆ, ಅಧಿಕಾರ ಹೋದಾಗ ಮಜಾ’
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಲೇಷ್ಯಾಕ್ಕೆ ತೆರಳಿ ಮಜಾ ಮಾಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜವೇ ಆಗಿದ್ದರೆ ದುರ್ದೈವ ಎಂದರು.
‘ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿದೆ. ಜನ ಸಂಕಷ್ಟದಲ್ಲಿದ್ದಾರೆ. ಅಧಿಕಾರದಲ್ಲಿದ್ದಾಗ ಜನರ ಬಳಿ ಹೋದವರು, ಅಧಿಕಾರ ಹೋದ ತಕ್ಷಣ ಮಜಾ ಮಾಡಲು ಹೋಗಿದ್ದಾರೆ’ ಎಂದರು.