ನವದೆಹಲಿ: ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ‘ಶುಭ ಮುಹೂರ್ತ’ಕ್ಕಾಗಿ ಕಾಯುತ್ತಿದ್ದಾರೆ.
ಕರ್ನಾಟಕದ ಇತರ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದಾಗ ಪ್ರಜ್ವಲ್ ಅವರು ಸದನದಲ್ಲಿ ಇರಲಿಲ್ಲ. ಪ್ರಮಾಣ ವಚನ ಸ್ವೀಕರಿಸುವ ಸರದಿ ಬಂದಾಗ ಅವರ ಹೆಸರನ್ನು ಕರೆದಾಗಲೂ ಹಾಜರಿರಲಿಲ್ಲ.
ಶುಕ್ರವಾರ ಮಧ್ಯಾಹ್ನ 2.30ರ ನಂತರ ಪ್ರಮಾಣ ವಚನಕ್ಕೆ ಸಮಯ ನೀಡಬೇಕು ಎಂದು ಅವರು ಲೋಕಸಭೆಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಹಾಗೂ ಅವರ ಕುಟುಂಬದ ಕೆಲ ಸದಸ್ಯರುಅಂದು ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಬುಧವಾರ ಕರೆದಿದ್ದ ಕರ್ನಾಟಕ ಸಂಸದರ ಸಭೆಯಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.