ಬೆಂಗಳೂರು: ಸಂಸದ ಪ್ರತಾಪ ಸಿಂಹ ಅವರಿಗೆ ‘ಜನಪ್ರತಿ ನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ ಶುಕ್ರವಾರ ಬಿಸಿ ಮುಟ್ಟಿಸಿತು. ಏಳು ತಾಸುಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನಂತರ ಜಾಮೀನು ನೀಡಿತು.
ಚಿತ್ರ ನಟ ಪ್ರಕಾಶ್ ರೈ (ಪ್ರಕಾಶ ರಾಜ್) ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದ ₹1 ಮೊತ್ತದ ಮಾನನಷ್ಟ ಮೊಕದ್ದಮೆ ಪ್ರಕರಣದ ಆರೋಪಿ ಪ್ರತಾಪ ಸಿಂಹ ವಿಚಾರಣೆಗೆ ಸತತ ಗೈರು ಹಾಜರಾಗಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಕಾರಣಕ್ಕೆಕೋರ್ಟ್ಗೆ ಹಾಜರಾದ ಪ್ರತಾಪ, ಮುಂಗಡ ಅರ್ಜಿ ಸಲ್ಲಿಸಿ ವಾರಂಟ್ ಹಿಂಪಡೆಯುವಂತೆ ಕೋರಿದರು.
ಅರ್ಜಿ ಪರಿಶೀಲಿಸಿದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ, ‘ವಿಚಾರಣೆ ಕೈಗೆತ್ತಿಕೊಳ್ಳುವವರೆಗೆ ಆರೋಪಿ ಪೊಲೀಸರ ವಶದಲ್ಲಿ ಇರಲಿ’ ಎಂದರು. ಸಂಜೆ 5.45ಕ್ಕೆ ವಿಚಾರಣೆ ನಡೆಸಿದರು.
₹ 10 ಸಾವಿರ ನಗದು ಭದ್ರತೆಯೊಂದಿಗೆ ಜಾಮೀನು ನೀಡಿದರು. ವಾರಂಟ್ ಹಿಂಪಡೆಯಲು ₹ 100 ಕೋರ್ಟ್ ವೆಚ್ಚ ಭರಿಸುವಂತೆ ಆದೇಶಿಸಿದರು.