ಕಲಬುರ್ಗಿ: ‘ಮೋದಿ ಅವರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ನಾಲಿಗೆ ಸುಡಬೇಕಾಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಯಚಂದ್ರ ಅವರು ಎಚ್ಚರಿಕೆಯಿಂದ ಮಾತನಾಡದಿದ್ದರೆ ನಾವು ನಮ್ಮ ಬತ್ತಳಿಕೆಯಲ್ಲಿನ ಪದಗಳನ್ನು ಪ್ರಯೋಗಿಸಬೇಕಾಗುತ್ತದೆ’ ಎಂದರು.
‘ರಾಹುಲ್ ಗಾಂಧಿ ಕನಿಷ್ಠ ಬುದ್ಧಿ ಇರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ಅವನೊಬ್ಬ ಅರೆಹುಚ್ಚ, ರಾಜ್ಯದಲ್ಲಿರುವವರು ಬುದ್ಧಿಗೇಡಿಗಳು. ರಾಹುಲ್ ಪ್ರಧಾನಿಯನ್ನು ಚೋರ್ ಎಂದು ಕರೆಯುತ್ತಾರೆ. ಅವರಿಗೆ ಬುದ್ಧಿ ಇಲ್ಲ’ ಎಂದು ಹರಿಹಾಯ್ದರು.
‘ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ. ಒಂದು ವರ್ಗವನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ. ಅವರಿಗೆ ನಿಜವಾಗಲೂ ಮುಸ್ಲಿಮರ ಬಗ್ಗೆ ಗೌರವವಿದ್ದರೆ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಜಯಂತಿ ಆಚರಿಸಬೇಕಾಗಿತ್ತು’ ಎಂದರು.