ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲೂ ಪ್ರವಾಹದಿಂದಾದ ಹಾನಿಯನ್ನು ವೀಕ್ಷಿಸಿಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸಮರ್ಥಿಸಿಕೊಂಡರು.
ಇಲ್ಲಿ ಶುಕ್ರವಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ‘ನೆರೆ ಪರಿಹಾರ ಬಿಡುಗಡೆ ಮೊದಲಾದ ವಿಷಯಗಳಲ್ಲಿ ನೇರವಾಗಿ ಜವಾಬ್ದಾರಿ ಇರುವುದು ಗೃಹ ಸಚಿವರಿಗೆ. ಅವರು ಈಗಾಗಲೇ ಬಂದು ಹೋಗಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಯಾವುದೇ ರಾಜ್ಯಕ್ಕೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಇಂದಲ್ಲ ನಾಳೆ ಹಣ ಬಂದೇ ಬರುತ್ತದೆ. ಅಲ್ಲಿವರೆಗೆ ಸರ್ಕಾರದಿಂದ ಖರ್ಚು ಮಾಡಿ ಕೇಂದ್ರದಿಂದ ಪಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.
‘ಬೆಳೆ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಮನೆ ಹಾನಿಯಾದರೆ ಎನ್ಡಿಆರ್ಎಫ್ ನಿಯಮಗಳ ಪ್ರಕಾರ, ₹97ಸಾವಿರ ಕೊಡಲಷ್ಟೇ ಅವಕಾಶವಿದೆ. ಆದರೆ, ನಾವು ₹ 5 ಲಕ್ಷದವರೆಗೆ ಕೊಡುತ್ತಿದ್ದೇವೆ. ಹಿಂದಿನ ಯಾವ ಸರ್ಕಾರವೂ ಈ ದಿಟ್ಟ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.