ಬೆಂಗಳೂರು: ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ 6ನೇ ಆವೃತ್ತಿಯ ಅಂತಿಮ ಸ್ಪರ್ಧೆ ಗುರುವಾರ ಇಲ್ಲಿ ನಡೆದಿದ್ದು, ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿಯ ಐಸಿಎಸ್ಇ ಶಾಲೆಯ ಆದಿತ್ಯ ರಾವ್ ಮತ್ತು ಆದಿತ್ಯ ಆಚಾರ್ಯ ಅವರುಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ತೀವ್ರ ಸ್ಪರ್ಧೆಯಿಂದ ಕೂಡಿದ್ದ ಅಂತಿಮ ಸುತ್ತಿನಲ್ಲಿ ಕ್ರೈಸ್ಟ್ ಅಕಾಡೆಮಿ ಮತ್ತು ಬ್ರಹ್ಮಾವರದಲಿಟಲ್ ರಾಕ್ ಇಂಡಿಯನ್ ಶಾಲೆಯಪ್ರಭವ್ ಮತ್ತು ರಕ್ಷಿತ್ ಅವರಿದ್ದ ತಂಡಗಳಿಗೆ ಸಮಾನ ಅಂಕಲಭಿಸಿತ್ತು. ಹೀಗಾಗಿ ಟೈಬ್ರೇಕರ್ ಪ್ರಶ್ನೆ ಕೇಳುವ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು.
ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಗೌರವ್ ಚಂದನ್ ಮತ್ತು ಗಗನ್ ಚಂದನ್ ಮೂರನೇ ಸ್ಥಾನ,ಹುಬ್ಬಳ್ಳಿಯ ಪರಿವರ್ತನ ಗುರುಕುಲ ಹೆರಿಟೇಜ್ ಶಾಲೆಯ ಶ್ರೀಜನ್ ಮಹೇಶ್ವರ್ ಮತ್ತು ಗಣೇಶ್ ನಾಲ್ಕನೇ ಸ್ಥಾನ, ಮಂಗಳೂರಿನ ಕೆನರಾ ಸಿಬಿಎಸ್ಸಿ ಶಾಲೆಯ ಪ್ರಥಮ್ ಮತ್ತು ಶಶಾಂಕ್ 5ನೇ ಸ್ಥಾನ ಗಳಿಸಿದರು.
ಎಲ್ಲರಿಗೂ ಟ್ರೋಫಿ ಜತೆಗೆ ನಗದು ಬಹುಮಾನ (ಕ್ರಮವಾಗಿ ₹ 50 ಸಾವಿರ, ₹30 ಸಾವಿರ, ₹ 10 ಸಾವಿರ, ₹6 ಸಾವಿರ, ₹ 4 ಸಾವಿರ) ನೀಡಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಬಹುಮಾನ ವಿತರಿಸಿದರು.
ಸರ್ಕಾರಿ ಶಾಲೆಗಳಲ್ಲೂ ಕ್ವಿಜ್: ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮುಂದಿನ ವರ್ಷ ‘ಪ್ರಜಾವಾಣಿ’ ಸಹಯೋಗದಲ್ಲಿ ಕ್ವಿಜ್ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಮ್ಮ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.