ಬೆಂಗಳೂರು: ಹಿಂಗಾರು ಹಂಗಾಮಿನಲ್ಲಿ ಬರ ಪೀಡಿತವೆಂದು ಘೋಷಿಸಿದ ತಾಲ್ಲೂಕುಗಳ ಅಧ್ಯಯನಕ್ಕೆ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ಒಟ್ಟು 10 ಅಧಿಕಾರಿಗಳ ಮೂರು ತಂಡ ರಾಜ್ಯಕ್ಕೆ ಇದೇ 27 ಮತ್ತು 28ರಂದು ರಾಜ್ಯಕ್ಕೆ ಬರಲಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಬರ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಮಾಹಿತಿ ಪಡೆಯಲಿರುವ ತಂಡದ ಸದಸ್ಯರು, ಮಾರ್ಚ್ 1ರಂದು ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.
ಹಿಂಗಾರು ಅವಧಿಯಲ್ಲಿ ರಾಜ್ಯ 156 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ₹ 1,1384.47 ಕೋಟಿ ನಷ್ಟ ಅಂದಾಜಿಸಲಾಗಿದ್ದು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಅನ್ವಯ ₹ 2,064.34 ಕೋಟಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಶನಿವಾರ ಭೇಟಿ ಮಾಡಿದ ದೇಶಪಾಂಡೆ, ಮುಂಗಾರು ಅವಧಿಯಲ್ಲಿ ಬರಪೀಡಿತ ತಾಲ್ಲೂಕುಗಳಿಗೆ ಘೋಷಿಸಿದ ₹ 949.49 ಕೋಟಿ ನೆರವಿನ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಸಾಧಾರಣ ಬರ ಪೀಡಿತ ಎಂದು ಘೋಷಿಸಿದ 28 ತಾಲ್ಲೂಕುಗಳಿಗೂ ಪರಿಹಾರ ಘೋಷಿಸುವಂತೆ ಮನವಿ ಮಾಡಿದರು.