ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಸ್ವಾಮೀಜಿ ಪ್ರಕರಣ ನ್ಯಾಯಾಲಯ ನಿರ್ಣಯ ನೀಡಲಿ

‘ಶಂಕರ ನಮನ’ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿ ಹೇಳಿಕೆ
Last Updated 13 ಜನವರಿ 2019, 17:54 IST
ಅಕ್ಷರ ಗಾತ್ರ

ಶಿರಸಿ: ‘ಶಂಕರ ಪರಂಪರೆಯ ಎಲ್ಲ ಮಠಗಳನ್ನು ಉಳಿಸುವ ಜತೆಗೆ ಶಂಕರರ ತತ್ವ, ಧರ್ಮ ಹಾಗೂ ಸಮಾಜವನ್ನು ರಕ್ಷಿಸುವುದಕ್ಕಾಗಿ, ಸನ್ಯಾಸ ಜೀವನದಿಂದ ಪತಿತರಾದ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಬೇಕು‘ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನವು ಅಖಿಲ ಹವ್ಯಕ ಒಕ್ಕೂಟ, ವೇದಾಂತ ಭಾರತಿ ಸಂಘಟನೆ ಜೊತೆಗೂಡಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಶಂಕರ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಂಕರ ಪರಂಪರೆಯ ಎಲ್ಲ ಪೀಠಗಳ ರಕ್ಷಣೆಯಾದಾಗ ಮಾತ್ರ ಧರ್ಮ ಉಳಿಯುತ್ತದೆ. ಇಲ್ಲವಾದರೆ ಭವಿಷ್ಯದಲ್ಲಿ ‘ಆ ಮಠ’ಕ್ಕೆ, ಧರ್ಮಕ್ಕೆ ದುಃಸ್ಥಿತಿ ಬರಬಹುದು’ ಎಂದು ರಾಮಚಂದ್ರಾಪುರ ಮಠದ ಹೆಸರನ್ನು ಉಲ್ಲೇಖಿಸದೇ ಆತಂಕ ವ್ಯಕ್ತಪಡಿಸಿದ ಶ್ರೀಗಳು, ‘ಈ ಕಾರಣಕ್ಕೆ ನ್ಯಾಯಾಲಯವು ಯಾವುದಕ್ಕೂ ಬಗ್ಗದೇ, ವಿಳಂಬ ಮಾಡದೇ ನಿರ್ಣಯ ನೀಡಬೇಕು‘ ಎಂದರು.

‘ಶಂಕರರ ತತ್ವ ಪ್ರತಿಪಾದಿಸುವ ಅನೇಕ ಮಠಗಳು ಅವಿಚ್ಛಿನ್ನ ಪರಂಪರೆ ಹೊಂದಿವೆ. ಆದರೆ ಇಡೀ ಜಗತ್ತಿನಲ್ಲಿ ನಮ್ಮ ಮಠ ಮಾತ್ರ ಅವಿಚ್ಛಿನ್ನ ಪರಂಪರೆ ಹೊಂದಿದೆಯೆಂದು ‘ಆ ಮಠ’ ಹೇಳಿಕೊಳ್ಳುವುದು ಸರಿಯಲ್ಲವೇನೋ ಎನ್ನಿಸುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ಅವರಿಗೆ’ ಬೇಕಾದ ಹಾಗೆ ನಿರ್ಣಯ ಸ್ವೀಕರಿಸುವ ಮಾಹಿತಿ ಸಿಕ್ಕಿತು. ಇದರಿಂದ ಅನ್ಯಾಯಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂಬ ಕಾರಣಕ್ಕೆ ಸಮ್ಮೇಳನದಲ್ಲಿ ಭಾಗವಹಿಸಬಾರದೆಂದು ಕೊನೆಯ ಕ್ಷಣದಲ್ಲಿ ನಿರ್ಧರಿಸಲಾಯಿತು’ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಯಡತೊರೆ ಮಠದ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ‘ಸನ್ಯಾಸಾಶ್ರಮಕ್ಕೆ ವೇದ ಪ್ರಮಾಣವಾದರೆ, ಮಠಾಧೀಶರಿಗೆ ಶಂಕರರ ಮಠಾಮ್ನ್ಯಾಯವೇ ಪ್ರಮಾಣವಾಗಿದೆ. ಸನ್ಯಾಸಿಯಾದವರು ನೈತಿಕ ಬ್ರಹ್ಮಚರ್ಯ ಕಳೆದುಕೊಂಡು ಬಿದ್ದರೆ, ಮತ್ತೆ ಮೇಲೇಳಲು ಅವಕಾಶವಿಲ್ಲ. ಇದು ಮಹಾಪಾತಕಕ್ಕಿಂತ ಘೋರವಾಗಿದೆ. ಅಂಥವರನ್ನು ಸಮಾಜ ದೂರವಿಡಬೇಕು. ಸನ್ಯಾಸಾಶ್ರಮದಿಂದ ಪತಿತರಾದವರನ್ನು ಸನಾತನ ಧರ್ಮ ಸಂವರ್ಧಿನಿ ಸಭಾದ ಸದಸ್ಯರಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಣಯ ಸ್ವೀಕರಿಸಿ, ಅಂತಹ ಮಠವು ಯೋಗ್ಯ, ನಿಷ್ಕಾಮ ವ್ಯಕ್ತಿಯನ್ನು ಮಠಾಧಿಪತಿಯನ್ನಾಗಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಈ ಸಂಘಟನೆಗೆ ಸಂಬಂಧವೇ ಇಲ್ಲದ ಅಖಿಲ ಹವ್ಯಕ ಮಹಾಸಭಾವು ಸಭೆಯ ನಿರ್ಣಯವನ್ನು ಖಂಡಿಸಿದೆ’ ಎಂದರು.

‘ಖಂಡಿಸಿದವರಿಗೆ ಸತ್ಯ ಗೊತ್ತಿಲ್ಲವೆಂದಲ್ಲ, ಆರೋಪಿತರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಆರೋಪಿಗಳ ರಕ್ಷಣಾ ಪರಂಪರೆ ಹುಟ್ಟುಕೊಂಡಿದೆ. ‘ತೃಷೆ ತೀರಿಸಿಕೊಳ್ಳುವವ ಗುರುವಾಗಲಾರ. ಆಚಾರ ಅನುಸರಿಸದಿದ್ದರೆ ಶಂಕರ ಪರಂಪರೆಯ ಪೀಠದಲ್ಲಿ ಯಾವುದೇ ಸ್ವಾಮೀಜಿ ಕುಳಿತುಕೊಳ್ಳುವುದು ಸರಿಯಲ್ಲ’ ಎಂದರು.

ಸಭೆಯಲ್ಲಿ ವ್ಯಕ್ತಗೊಂಡಿದ್ದು...

ಶಂಕರರು ಸ್ಥಾಪಿಸಿದ ಆಮ್ನ್ಯಾಯ ಪೀಠಗಳನ್ನು ಅಲಂಕರಿಸುವವರು ಯಾವ ರೀತಿ ಇರಬೇಕು ಎಂಬ ನೀತಿಗಳಿವೆ. ಆದರೆ ಅಂಥ ನಿಯಮ ಮೀರಿಯೂ ಪೀಠ ಅಲಂಕರಿಸುತ್ತಿದ್ದಾರೆ. ನಮ್ಮ ಗೌರವವನ್ನು ನಾವೇ ಕಡಿಮೆ ಮಾಡಿಕೊಳ್ಳುತ್ತ, ಶಂಕರರ ಗೌರವವನ್ನೂ ಕಡಿಮೆ ಮಾಡುತ್ತಿದ್ದಾರೆ. ಶಂಕರರು ಉಪದೇಶಿಸಿದ ತತ್ವಗಳನ್ನು ಸಮಾಜಕ್ಕೆ ನೀಡುವವರನ್ನು ಬೆಂಬಲಿಸದೇ ಶಂಕರ ಭಗವತ್ಪಾದರಿಗೆ ಅಗೌರವ ತೋರುತ್ತಿರುವವರನ್ನು ಬೆಂಬಲಿಸಲಾಗುತ್ತಿದೆ. ನಂಬಿಕೆಯೇ ಸನಾತನ ಧರ್ಮದ ಮೂಲವಾಗಿರುವಾಗ ಅಂಥ ನಂಬಿಕೆಗೆ ಧಕ್ಕೆ ತರುವವರನ್ನು ಹವ್ಯಕರು ಎಂದಿಗೂ ಒಪ್ಪಿಕೊಳ್ಳಲಾಗದು

– ವಿ.ಆರ್.ಗೌರಿಶಂಕರ, ಶೃಂಗೇರಿ ಜಗದ್ಗುರು ಪೀಠದ ಆಡಳಿತಾಧಿಕಾರಿ

**

ಪಾಂಡವರ ಎದುರು ಕೌರವವರು ದೂಳೀಪಟವಾಗಿರುವುದು ಪುರಾಣದಲ್ಲೇ ಇದೆ.ಧರ್ಮ ಮತ್ತು ನೈತಿಕತೆ ಇದ್ದಲ್ಲಿ ಜಯ ನಿಶ್ಚಿತ. ಶಂಕರರ ತತ್ವ ತಿಳಿದವರು ಮಾತ್ರ ಸರ್ವಜ್ಞ ಪೀಠ ಏರುತ್ತಾರೆ. ಈ ಪೀಠ ದಂತಪೀಠವಾಗಲೀ, ರಾಜ ಸಿಂಹಾಸನವಾಗಲೀ ಅಲ್ಲ. ಶಂಕರರ ತತ್ವ ತಿಳಿಯದವರು ಮಾತ್ರ ಇಂಥ ಅಧಾರ್ಮಿಕ ಪೀಠ ಏರುತ್ತಾರೆ. ಶಂಕರರನ್ನು ಅಧ್ಯಯನ ಮಾಡದೇ, ಅಭಿನವ ಶಂಕರಾಚಾರ್ಯರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

–ಟಿ. ಶ್ಯಾಮ ಭಟ್ಟ- ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ

**
ಅನಾಚಾರಗಳಿಂದ ಶಿಥಿಲವಾಗುತ್ತಿರುವ ಧರ್ಮದ ನೆಲೆ ಗಟ್ಟಿಗೊಳಿಸುವುದು ಒಕ್ಕೂಟದ ಉದ್ದೇಶವೇ ವಿನಾ ಹವ್ಯಕ ಮಹಾಸಭಾದ ಸಮಕ್ಕೆ ಬೆಳೆಯುವ ಉದ್ದೇಶ ನಮ್ಮದಲ್ಲ. ಅಧರ್ಮ ಪಾಲನೆಯಾಗುತ್ತಿರುವ ಸಂದರ್ಭವನ್ನು ಮೊಟಕು ಮಾಡಿ, ಸತ್ಯ ಪ್ರತಿಪಾದನೆಗಾಗಿ ಹುಟ್ಟಿಕೊಂಡ ಸಂಸ್ಥೆ ಇದು.

-ಅಶೋಕ ಭಟ್ಟ ಶಿವಮೊಗ್ಗ, ಅಖಿಲ ಹವ್ಯಕ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT