ಚಿತ್ರದುರ್ಗ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಕಾಂಗ್ರೆಸ್–ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಹುಲ್ ಗಾಂಧಿ ಅವರು ಕೋಲಾರದಿಂದ ಮಧ್ಯಹ್ನ 2ಕ್ಕೆ ಚಿತ್ರದುರ್ಗಕ್ಕೆ ಹೆಲಿಕಾಪ್ಟರ್ನಲ್ಲಿ ಬರಲಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ತೆರಳಲಿದ್ದಾರೆ.
ಏ.9ರಂದು ನರೇಂದ್ರ ಮೋದಿ ಅವರು ಇಲ್ಲಿ ರ್ಯಾಲಿ ನಡೆಸಿದ್ದರು. ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್–ಜೆಡಿಎಸ್ ಮಿತ್ರ ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ.
ರಾಹುಲ್ ಸಭೆಗೆ ಬರಲು ಚಲುವರಾಯಸ್ವಾಮಿ ಒಪ್ಪಿಗೆ ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಜಂಟಿ ಪ್ರಚಾರಕ್ಕೆ ಚಲುವರಾಯಸ್ವಾಮಿ ಅವರನ್ನು ಕರೆದೊಯ್ಯಲು ಸಿದ್ದರಾಮಯ್ಯ ಶುಕ್ರವಾರ ಸುಮಾರು 40 ನಿಮಿಷ ನಡೆಸಿದ ಕಸರತ್ತು ಸಫಲವಾಗಲಿಲ್ಲ. ಶನಿವಾರ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಸೂಚನೆ ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದರೂ ಕೇಳದ ಚಲುವರಾಯಸ್ವಾಮಿ, ಯಾವುದೇ ಕಾರಣಕ್ಕೂ ನಿಖಿಲ್ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಜತೆಯಲ್ಲೇ ಕಾರಿನಲ್ಲಿ ತೆರಳಿದ ಚಲುವರಾಯಸ್ವಾಮಿಯ ಮನವೊಲಿಸಲು ಸಿದ್ದರಾಮಯ್ಯ ಹೆಲಿಕಾಪ್ಟರ್ ಹತ್ತುವ ತನಕವೂ ಪ್ರಯತ್ನ ನಡೆಸಿದರು. ಕೊನೆಗೂ ಫಲ ಸಿಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಮಂಡ್ಯಕ್ಕೆ ಹೊರಟರೆ, ಚಲುವರಾಯಸ್ವಾಮಿ ಬೆಂಗಳೂರಿನಲ್ಲೇ ಉಳಿದುಕೊಂಡರು ಎಂದು ಮೂಲಗಳು ತಿಳಿಸಿವೆ.