ಹಾವೇರಿ: ಕಾಂಗ್ರೆಸ್ ಪಕ್ಷವು ನಗರದಲ್ಲಿಆಯೋಜಿಸಿದ್ದ ‘ಪರಿವರ್ತನಾ ರ್ಯಾಲಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಹಾಗೂ ರಾಷ್ಟ್ರೀಯ ನಾಯಕರನ್ನು ಹೊಗಳುವ ಭರದಲ್ಲಿ ನಾಲಿಗೆ ಹರಿಬಿಟ್ಟು ಯಡವಟ್ಟು ಮಾಡಿದರು.
ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವುದಕ್ಕೂ ಮುನ್ನ ವೇದಿಕೆ ಏರಿದಖಂಡ್ರೆ ಕಾಂಗ್ರೆಸ್ ಪಕ್ಷದ ಗುಣಗಾನ ಮಾಡಿದರು. ಇಂದು ದೇಶ ಸ್ವಾವಲಂಬಿಯಾಗಿದೆ. ಸ್ವಾಭಿಮಾನಿಯಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಇಷ್ಟೊಂದು ಅಭಿವೃದ್ಧಿ ಸಾಧಿಸಿರುವುದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಎಂದರು.
ಮುಂದುವರಿದು,‘ದೇಶದ ಏಕತೆ, ಅಖಂಡತೆ, ಸಮಗ್ರತೆಗಾಗಿ ಇಂದಿರಾ ಗಾಂಧಿ ಅವರು ಭಯೋತ್ಪಾದಕರ ದಾಳಿಗೆ ಬಲಿಯಾದರು’ ಎಂದರು. ‘ಅದೇ ರೀತಿಯಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕರಾದಂತಹ ರಾಹುಲ್ ಗಾಂಧಿ ಅವರು ಇವತ್ತು ಭಯೋತ್ಪಾದಕರಿಗೆ ಬಲಿಯಾದರು’ ಎಂದು ಹೇಳಿದರು. ಈ ಹೇಳಿಕೆಯು ಪಕ್ಷ ಹಾಗೂ ನಾಯಕರಿಗೆ ಮುಜುಗರ ತಂದಿತು.
ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಿ, ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಹೇಳುವ ಬಿಜೆಪಿಯವರ ಮಾತಿನ ಮೋಡಿಗೊಳಗಾಬೇಡಿ ಎಂದು ಕರೆ ನೀಡಿದರು.