ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಕಪ್ಪೆಗಳಿಗೆ ಮದುವೆ ಮಾಡಲಾಯಿತು.
ಜಿಲ್ಲೆಯಲ್ಲಿ ಮುಂಗಾರು ಮಳೆ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಹಿಡಿದು ಗ್ರಾಮದ ಪೈಸಾರಿಯಲ್ಲಿ ಮರದ ಕೆಳಗೆ ಹಸಿರು ಚಪ್ಪರ ಹಾಕಿ ಎರಡು ಕಪ್ಪೆಗಳಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು.
ಜೋಡಿ ಕಪ್ಪೆಗಳನ್ನು ವಿಶೇಷ ಅಲಂಕಾರದೊಂದಿಗೆ ಮೆರವಣಿಗೆ ಮಾಡಿದರು. ಈ ಮದುವೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ರೈತರು ಹಾಗೂ ಮಹಿಳೆಯರು ಪಾಲ್ಗೊಂಡರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.