ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ. ಶಿರಸಿ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಮನೆಗಳ ಹೆಂಚು ಹಾನಿಯಾಗಿದ್ದು, ಹಲವು ವಿದ್ಯುತ್ ಕಂಬಗಳು ಉರುಳಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಿಂದಾಗಿ ಬಾಳೆ, ಮುಸುಕಿನ ಜೋಳ, ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ.
ಧಾರವಾಡ, ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಕಾನಹೊಸಹಳ್ಳಿ ಹಾಗೂ ಗದಗ ಜಿಲ್ಲೆಯ ಡಂಬಳದಲ್ಲಿ ಮಳೆ ಸುರಿಯಿತು. ರಂಗನಾಥನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ.
ಶಿರಸಿ ಹಾಗೂ ಮುಂಡಗೋಡ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸಿಡಿಲು ಸಮೇತ ಮಳೆಗೆ ಮನೆಗಳಿಗೆ ಹಾನಿ ಯಾಗಿದ್ದು, 72ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಗಾಳಿ ಮಳೆಗೆ ಸಮೀಪದ ರಾಮಸಮುದ್ರ, ಅಯ್ಯನಪುರ ಗ್ರಾಮದ 10ಕ್ಕೂ ಹೆಚ್ಚು ರೈತರು ಬೆಳೆದ ಬಾಳೆ, ಮುಸುಕಿನ ಜೋಳ, ಮೆಕ್ಕೆಜೋಳ ನಾಶವಾಗಿದೆ.
ಹನೂರು ತಾಲ್ಲೂಕಿನ ಚಂಗವಾಡಿಗ್ರಾಮದ ಐದು ಎಕರೆ ಪ್ರದೇಶದಲ್ಲಿ ಜೋಳ, ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆ ನೆಲಕಚ್ಚಿದೆ.