ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಗುರುವಾರ ರಾತ್ರಿ ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಗೆ ಮೂರು ಮನೆಗಳಿಗೆ ಹಾನಿಯಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಗುಡುಗುಸಹಿತ ಆಲಿಕಲ್ಲು ಮಳೆ ಬಿದ್ದಿದ್ದು, ನೆಹರೂ ನಗರದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.
ಇಲ್ಲಿನ ರಾಜಾ ಕಾಲುವೆಗಾಗಿ ನಿರ್ಮಿಸಿದ್ದತಡೆಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿದೆ. ಇನ್ನೂ ಕೆಲ ಮನೆಗಳು ಅಪಾಯದಲ್ಲಿವೆ. ಸಮೀಪದ ಐಮಂಗಲ, ಆರ್ಜಿ, ಕುಕ್ಲೂರು, ಅಂಬಟ್ಟಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಳೆ ಬಿದ್ದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಸಾಸ್ವೆಹಳ್ಳಿಯಲ್ಲಿ ತುಂತುರು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹೊಸನಗರಗಳಲ್ಲಿ ಮಳೆಯಾಗಿದೆ.
ಹುಬ್ಬಳ್ಳಿ- ಧಾರವಾಡ, ಕಲಘಟಗಿ, ನವಲಗುಂದ ಹಾಗೂ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿದೆ.
ಬಿಸಿಲಿನ ಝಳಕ್ಕೆ ಬಸವಳಿದಿದ್ದ ಬೀದರ್ ನಗರದ ಜನತೆಯ ಮೊಗದಲ್ಲಿ ಶುಕ್ರವಾರ ಸಂಜೆ ವರುಣನ ಸಿಂಚನ ಮಂದಹಾಸ ಮೂಡಿಸಿತು. 15 ನಿಮಿಷ ಅಬ್ಬರಿಸಿದ ಮಳೆಯಿಂದ ನಗರಕ್ಕೆ ತಂಪೆರೆದಂತಾಯಿತು. ಮಳೆ ಸುರಿಯುತ್ತಿದ್ದಂತೆಯೇ ನಗರದ ಜನತೆ ಸಂತಸಗೊಂಡರು. ಕೆಲವರು ಮಳೆಯಲ್ಲೇ ಸಾಗಿದರು.