ಹುಬ್ಬಳ್ಳಿ: ಬಿಸಿಲ ಧಗೆಗೆ ಕಾದ ಹೆಂಚಿನಂತಾಗಿದ್ದ ಹುಬ್ಬಳ್ಳಿ– ಧಾರವಾಡ, ಕುಂದಗೋಳ ಹಾಗೂ ನವನಗರದಲ್ಲಿ ಶನಿವಾರ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿಯಿತು.
ಭಾರಿ ಗಾಳಿ, ಗುಡುಗು ಮಿಂಚಿನೊಂದಿಗೆ ಸುಮಾರು ಒಂದೂವರೆ ತಾಸು ಮಳೆಗರೆಯಿತು. ರಸ್ತೆ, ಚರಂಡಿಗಳು ಕೆಲಹೊತ್ತು ಜಲಾವೃತವಾಗಿದ್ದವು.
ಕುಂದಗೋಳ, ಕಮಡೊಳ್ಳಿಯಲ್ಲಿಯೂ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿಯಲ್ಲಿಯೂ ಆಲಿಕಲ್ಲು ಮಳೆ ಸುರಿದಿದೆ. ಬಳ್ಳಾರಿ ಜಿಲ್ಲೆಯ ಗೊಲ್ಲರಹಳ್ಳಿಯಲ್ಲಿ ಸಿಡಿಲು ಬಡಿದು ಎತ್ತು ಸತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನಲ್ಲಿ ಶನಿವಾರ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ತೆಕ್ಕೂರು, ಕೊಚ್ಚವಳ್ಳಿ, ಕುಂಚೇಬೈಲು, ಅಡ್ಡಗದ್ದೆ, ಮೆಣಸೆ, ಹಾಲಂದೂರು, ಕಿಕ್ರೆ, ಬೇಗಾರು, ಮೀಗಾ, ಕೆರೆಕಟ್ಟೆ, ಹಾದಿ, ತ್ಯಾವಣ, ನೆಮ್ಮಾರ್ ಪ್ರದೇಶದಲ್ಲಿ ರಭಸದ ಮಳೆ ಸುರಿದಿದೆ.
ಯೆಡೆಹಳ್ಳಿ ಗ್ರಾಮದ ಕೊದಂಡ ಅವರ 2 ದನ, ಸುಬ್ಬಣ್ಣ ಅವರ ಒಂದು ದನ, ಕಳಸಪ್ಪ ಗೌಡರ ಒಂದು ದನ ಸಿಡಿಲಿನ ಆಘಾತದಿಂದ ಮೃತಪಟ್ಟಿವೆ.
ಕಳಸದಲ್ಲಿಯೂ ಶನಿವಾರ ಒಂದು ಗಂಟೆ ಮಳೆ ಸುರಿದಿದೆ. ಕೊಟ್ಟಿಗೆಹಾರದಲ್ಲಿ ತುಂತುರು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಶನಿವಾರ ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಮಳೆಯಾಗಿದೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದೆ. ಪಟ್ಟಣದ ರಸ್ತೆಗಳಲ್ಲಿ ಚದುರಿ ಬಿದ್ದ ಆಲಿಕಲ್ಲುಗಳು ಮಲ್ಲಿಗೆ ಹೂವನ್ನು ಹರಡಿದಂತೆ ಭಾಸವಾಗುತ್ತಿತ್ತು. ಜಲ್ಲಿಕಲ್ಲಿನ ಗಾತ್ರದ ಆಲಿಕಲ್ಲು ಒಂದೇ ಸಮನೆ ಬೀಳುತ್ತಿತ್ತು. ಆಲಿಕಲ್ಲು ಆಯ್ದುಕೊಳ್ಳಲು ಮಕ್ಕಳು, ಯುವಕರು ಮುಂದಾದರು.
ಅಡಿಕೆ ಹಿಂಗಾರ ಗರಿ ಬಿಚ್ಚಿ ಕಾಳು ಕಟ್ಟುತ್ತಿರಿವುದರಿಂದ ಆಲಿಕಲ್ಲು ಮಳೆಯಿಂದಾಗಿ ಎಳೆ ಅಡಿಕೆಗೆ ತೊಂದರೆಯಾಗಿರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.