ಕಾರವಾರ:ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಕ್ಷೀಣಿಸಿದ್ದ ಮುಂಗಾರು ಶನಿವಾರ ಬೆಳಿಗ್ಗೆಯಿಂದ ಚುರುಕಾಗಿದೆ.ಯಲ್ಲಾಪುರ, ಜೊಯಿಡಾ, ಸಿದ್ದಾಪುರಸುತ್ತಮುತ್ತ ಶನಿವಾರ ಉತ್ತಮ ಮಳೆಯಾಯಿತು.
ಕರಾವಳಿಯ ಅಂಕೋಲಾದಲ್ಲಿ ದಿನವಿಡೀ ಆಗಾಗ ಬಿರುಸಾಗಿ ಮಳೆ ಸುರಿಯಿತು. ಕಾರವಾರ, ಕುಮಟಾದಲ್ಲಿ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಯಿತು. ಆದರೆ, ಭಟ್ಕಳ, ಹೊನ್ನಾವರದಲ್ಲಿ ಮೋಡ ಮತ್ತು ಬಿಸಿಲು ಕಾಣಿಸಿಕೊಂಡಿತು. ಹಳಿಯಾಳದಲ್ಲಿ ದಿನವಿಡೀ ಮಳೆಯಾದರೆ, ಮುಂಡಗೋಡದಲ್ಲಿಬಿಟ್ಟೂಬಿಟ್ಟು ಜಿಟಿಜಿಟಿ ಹನಿಯಿತು.
ಹುಬ್ಬಳ್ಳಿ ಧಾರವಾಡದಲ್ಲಿ ಹಾಗೂ ಸುತ್ತಮುತ್ತ ಆಗಾಗ ಮಳೆ ಸುರಿಯುತ್ತಲೇ ಇತ್ತು. ಹೊಸಪೇಟೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಸುರಿದ ಮಳೆಯಿಂದಾಗಿ ಹವಾಮಾನದಲ್ಲಿ ತಂಪು ಕಂಡುಬಂದಿತು. ಗದಗ ಹಾಗೂ ಬೆಳಗಾವಿಯಲ್ಲಿಯೂ ಇಡೀದಿನ ಜಿಟಿಜಿಟಿ ಮಳೆ ಇತ್ತು.ಬಿತ್ತನೆ ಮಾಡಿರುವ ರೈತರ ಮುಖದಲ್ಲಿ ಸಂತಸ, ಸಮಾಧಾನ ಕಾಣುವಂತಾಯಿತು.