ಬೆಂಗಳೂರು: ‘ರಾಜ್ಯದ ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಆಗಸ್ಟ್ 21ರಂದು ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಉತ್ತರ ಒಳನಾಡಿನ ಹಲವೆಡೆ ಮಂಗಳವಾರ ಹೆಚ್ಚು ಮಳೆಯಾಗಿದೆ. ಬುಧವಾರವೂ ಈ ಭಾಗಗಳಲ್ಲಿ ಮಳೆ ಹೆಚ್ಚಾಗಲಿದೆ. ಉಳಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.
ಮಂಗಳವಾರ ಹಾಸನದಲ್ಲಿ 10 ಸೆಂ.ಮೀ.ಮಳೆಯಾಗಿದೆ. ಸುಳ್ಯ 8, ಮಂಕಿ, ಹುಮನಾಬಾದ್, ಕೊಪ್ಪದಲ್ಲಿ ತಲಾ 7, ಮೈಸೂರು, ಕೋಲಾರ 5, ಭಟ್ಕಳ, ಪಾವಗಡ, ನೆಲಮಂಗಲದಲ್ಲಿ ತಲಾ 4 ಸೆಂ.ಮೀ.ಮಳೆಯಾಗಿದೆ.