ರಾಯಚೂರು: ಜಿಲ್ಲೆಯಾದ್ಯಂತ ರಾತ್ರಿಯಿಡೀ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, 67 ಜಾನುವಾರುಗಳು ಮೃತಪಟ್ಟಿವೆ ಹಾಗೂ ಒಂದು ಮನೆ ಕುಸಿತವಾಗಿದೆ.
ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯ ವಂದಾಲಿ ಗ್ರಾಮದ ಯಮನಪ್ಪ ಛತ್ರಪ್ಪ ಮುಂದಿನಮನಿ ಅವರಿಗೆ 65 ಆಡುಗಳು ಸಾವನ್ನಪ್ಪಿವೆ. 25 ಆಡುಗಳು ದೊಡ್ಡಿಯಲ್ಲಿಯೇ ಮೃತಪಟ್ಟಿವೆ. 40 ಆಡುಗಳು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಬಗಡಿ ತಾಂಡಾದಲ್ಲಿ ಈರಪ್ಪ ನಾರಾಯಣ ಅವರ ಮನೆ ಎದುರು ಮರದ ಕೆಳಗೆ ಒಂದು ಹಸು ಮತ್ತು ಒಂದು ಎಮ್ಮೆಗೆ ಸಿಡಿಲು ಬಡಿದು ಸಾವನ್ನಪ್ಪಿವೆ. ಮಾಜಿ ಶಾಸಕ ಮಾನಪ್ಪ ವಜ್ಜಲ ಸಹೋದರ ಕರಿಯಪ್ಪ ವಜ್ಜಲ ಅವರು ಭೇಟಿ ನೀಡಿ ರೈತನಿಗೆ ₹ 25 ಸಾವಿರ ವೈಯಕ್ತಿಕ ಧನಸಹಾಯ ಮಾಡಿದರು.
ಮಸ್ಕಿ ಜಲಾಶಯ 10 ವರ್ಷಗಳಲ್ಲಿ ಇದೇ ಮೊದಲ ಬಾರಿ ಸಂಪೂರ್ಣ ಭರ್ತಿಯಾಗಿದ್ದು, 3 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಚಿಕ್ಕ ಕಡಬೂರು ಹಿರೇ ಕಡಬೂರು, ಸುಂಕನೂರು, ಮಾರಲದಿನ್ನಿಯಿಂದ ಮಾರಲದಿನ್ನಿ ತಾಂಡಾ ಸಂಪರ್ಕಿಸುವ ಕಿರುಸೇತುವೆಗಳು ಮುಳುಗಡೆಯಾಗಿವೆ.
ರಾಯಚೂರು ತಾಲ್ಲೂಕಿನ ಹನುಮನದೊಡ್ಡಿ ಗ್ರಾಮದ ಪಾಪಯ್ಯ ಕುಂಬಾರ ಅವರ ಮನೆ ಕುಸಿತವಾಗಿದೆ. ಯಾವುದೇ ಜೀವಹಾನಿಯಾಗಿಲ್ಲ.