ಬೆಳಗಾವಿ: ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬುಧವಾರ 1.96 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ 8 ಸಾವಿರ ಕ್ಯುಸೆಕ್ ಹೆಚ್ಚಳವಾಗಿದೆ. ಈ ನಡುವೆ, ಅಲ್ಲಿ ಮಳೆಯು ಕ್ಷೀಣಿಸಿದ್ದು ಗುರುವಾರದ ವೇಳೆಗೆ ನೀರಿನ ಹರಿವು ಇಳಿಮುಖವಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲೂ ಮಳೆ ಕ್ಷೀಣಿಸಿದೆ. ಬೆಳಗಾವಿ, ಖಾನಾಪುರದಲ್ಲಿ ಜಿಟಿಜಿಟಿ ಮಳೆಯಾಗಿದ್ದು ಬಿಟ್ಟರೆ ಇನ್ನುಳಿದ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಮಲಪ್ರಭಾ ನದಿಯ ಒಳಹರಿವು 7,314 ಕ್ಯುಸೆಕ್ಗೆ ಇಳಿದಿದೆ. ಘಟಪ್ರಭಾ ನದಿಯ ಒಳಹರಿವು 22,337 ಕ್ಯುಸೆಕ್ಗೆ ಇಳಿದಿದೆ.
ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧಗಂಗಾ ನದಿ ನೀರಿನ ಒಳ ಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ಯಕ್ಸಂಬಾ-ದಾನವಾಡ ಮತ್ತು ಸದಲಗಾ-ಬೋರಗಾಂವ ಗ್ರಾಮಗಳ ಮಧ್ಯೆದ ಸೇತುವೆಗಳು ಮುಳುಗಡೆಯಾಗಿವೆ. ಇದರೊಂದಿಗೆ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಒಟ್ಟು 9 ಸೇತುವೆಗಳು ಮುಳುಗಡೆಯಾದಂತಾಗಿದೆ.