ಬೆಂಗಳೂರು: ಅರಬ್ಬಿ ಸಮುದ್ರದಿಂದ ತೆಲಂಗಾಣದವರೆಗೂ (ಟ್ರಫ್) ವಾಯುಭಾರ ಏರಿಕೆ ಕಂಡಿದ್ದರಿಂದ ರಾಜ್ಯದಲ್ಲಿ ಸೋಮವಾರ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದೆ.
ಭಾನುವಾರ, ಕೋಲಾರದ ಮಾಲೂರು 9,ರಾಯಲ್ಪಾಡು 4 ಬೆಂಗಳೂರು ನಗರದ ಕೆಲವೆಡೆ 6, ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ 5,ಮೈಸೂರಿನಎಚ್.ಡಿ ಕೋಟೆ 2 ಹಾಗೂ ಸರಗೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಬೀದರ್ನಲ್ಲಿ 11.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
‘ಬೆಂಗಳೂರಿನ ಯಲಹಂಕ, ರಾಜಾನುಕುಂಟೆ ಸೇರಿದಂತೆ ವಿವಿಧೆಡೆ ಮಳೆಯಾಗಿದ್ದು, ತಂಪು ವಾತಾವರಣ ಮುಂದುವರೆದಿತ್ತು. ಸದ್ಯಕ್ಕೇನು ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳು ಇಲ್ಲ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್. ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು,ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.