ಬಸವಕಲ್ಯಾಣ ತಾಲ್ಲೂಕಿನ ಉಮಾಪುರದಲ್ಲಿ ಸಿಡಿಲು ಬಡಿದು ಎಮ್ಮೆ ಮತ್ತು ಆಕಳು ಸಾವನ್ನಪ್ಪಿವೆ. ಮಂಗಳಾ ವೆಂಕಟ ಪಂಚಾಳ ಎಂಬುವರಿಗೆ ಸೇರಿದ ಈ ಜಾನುವಾರುಗಳನ್ನು ಹೊಲದಲ್ಲಿ ಮರವೊಂದಕ್ಕೆ ಕಟ್ಟಿ ಹಾಕಿದ್ದ ವೇಳೆ ಸಿಡಿಲು ಬಡಿದಿದೆ. ಕಮಲನಗರ ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ರೈತ ಶಿವಕಾಂತ ಬಸಪ್ಪ ಮೇತ್ರೆ ಎಂಬುವರಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು ಮೃತಪಟ್ಟಿವೆ.
ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಬಾಳೆಕಾಡು, ಗದ್ದೆಹಳ್ಳ, ಕೆದಕಲ್, ಎಮ್ಮೆಗುಂಡಿ, ಕೊಡಗರಹಳ್ಳಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಮಡಿಕೇರಿ, ಗಾಳಿಬೀಡು, ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ನಾಪೋಕ್ಲು ವ್ಯಾಪ್ತಿಯ ಬೇತು, ಪಾರಾಣೆ, ಕೈಕಾಡು ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ.
ಶಿವಮೊಗ್ಗ ಜಿಲ್ಲೆಯ ಹಲವೆಡೆಯೂ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರ, ಸಾಗರ, ಭದ್ರಾವತಿ ಸುತ್ತಮುತ್ತ ಮಳೆಯಾಗಿದೆ. ಹೊಸನಗರ, ಆನಂದಪುರ, ರಿಪ್ಪನ್ಪೇಟೆ ಸುತ್ತಮುತ್ತ ಭಾರಿ ಮಳೆಯಾಗಿದೆ.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆ ಸುರಿಯಿತು.
ವಿಜಯಪುರ, ದೇವರ ಹಿಪ್ಪರಗಿ, ತಿಕೋಟಾ ಸುತ್ತಮುತ್ತ, ಮುದ್ದೇಬಹಿಹಾಳ ತಾಲ್ಲೂಕಿನ ಢವಳಗಿ, ಸಿಂದಗಿ, ತಾಂಬಾ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.