ಕರ್ನಾಟಕದ ಚುನಾವಣೆ ಹಾಗೂ ಸರ್ಕಾರ ರಚನೆಯ ಪ್ರಹಸನದ ಒಂದು ಹಂತ ಮುಗಿದಿದೆ. ಪಕ್ಷಗಳ ಆರೋಪ ಪ್ರತ್ಯಾರೋಪ, ಸಮರ್ಥನೆ, ಅವಗಣನೆಗಳು ಏನೇ ಇರಲಿ, ಶ್ರೀಸಾಮಾನ್ಯ ಮತದಾರನ ಗೊಂದಲ ಮಾತ್ರ ಮುಗಿದಿಲ್ಲ. ಆ ಗೊಂದಲಕ್ಕೆ ರಾಜಕಾರಣಿಗಳು ನೀಡುವ ಉತ್ತರಗಳು ಸಮಾಧಾನ ತರುವಂಥವುಗಳಲ್ಲ. ಏಕೆಂದರೆ ಮತದಾರನದು ನೈತಿಕ ಪ್ರಶ್ನೆ.
ಸಿದ್ದರಾಮಯ್ಯ ಹೇಳಿದ್ದು: ‘ಕುಮಾರಸ್ವಾಮಿ ಮಹಾನ್ ಸುಳ್ಳುಗಾರ, ಹಿಟ್ ಅಂಡ್ ರನ್ ವ್ಯಕ್ತಿ. ಅವರಪ್ಪನಾಣೆಗೂ ಆತ ಮುಖ್ಯಮಂತ್ರಿ ಆಗುವುದಿಲ್ಲ. ಮುಂದಿನ ಮುಖ್ಯಮಂತ್ರಿ ನಾನೇ, ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ದೇವೇಗೌಡ ಅಲ್ಲ’ ಇತ್ಯಾದಿ... ಇತ್ಯಾದಿ.
ಜಮೀರ್ ಅಹ್ಮದ್ ಮಾತುಗಳು: ‘ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾನು ನನ್ನ ತಲೆ ಕತ್ತರಿಸಿಕೊಳ್ಳುತ್ತೇನೆ’.
ಕುಮಾರಸ್ವಾಮಿಯವರ ಹೇಳಿಕೆ: ‘ಯಾವ ಪಕ್ಷದ ಬೆಂಬಲವನ್ನೂ ಪಡೆಯದೆ ಮುಖ್ಯಮಂತ್ರಿಯಾಗುತ್ತೇನೆ. ಬಹುಮತ ಬಾರದಿದ್ದರೆ ವಿರೋಧಪಕ್ಷದ ಸ್ಥಾನದಲ್ಲಿ ಕೂರುತ್ತೇನೆ...’
ದೇವೇಗೌಡರು ಹೇಳಿದ್ದು: ‘ಸಿದ್ದರಾಮಯ್ಯನನ್ನು ಈ ಮಟ್ಟಕ್ಕೆ ಬೆಳೆಸಿದ್ದು ನಾನೇ. ಆತನೊಬ್ಬ ನೀಚ...’
ಇಂಥ ಮಾತುಗಳನ್ನು ಇನ್ನೂ ಅನೇಕರು ಆಡಿದ್ದಾರೆ. ಈ ಎಲ್ಲ ಮಾತುಗಳಿಗೆ ಸದ್ಯ ಏನೂ ಅರ್ಥವಿಲ್ಲವೇ? ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವಂತೂ ಪಕ್ಷರಾಜಕೀಯಕ್ಕಿಂತಲೂ ವ್ಯಕ್ತಿಗಳ ನಡುವಿನ ವ್ಯಗ್ರ ನೀಚ ಹೋರಾಟವಾಗಿತ್ತು. ಇದೀಗ ಇವರೆಲ್ಲ ಒಂದಾಗಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸರ್ಕಾರ ರಚಿಸುತ್ತಿದ್ದಾರೆ.
ಕಾಂಗ್ರೆಸ್ ತನ್ನ ಮೊದಲ ಹೆಜ್ಜೆಯಾಗಿ ಬಿಜೆಪಿಯನ್ನು ಜೀವಚ್ಛವವನ್ನಾಗಿಸಿದೆ. ಕೆಲ ಕಾಲಾನಂತರ ತನ್ನ ಎರಡನೆಯ ಹೆಜ್ಜೆಯಾಗಿ ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಸೆಳೆದು ಆ ಪಕ್ಷದ ತಿಥಿ ಮಾಡುವುದಂತೂ ಸತ್ಯ. ಆನಂತರ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಹಾಗೂ ಸರ್ಕಾರ. ಜಮೀರ್, ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ಕುತಂತ್ರ ರಾಜಕಾರಣವನ್ನು ಮಾಡಿಯೇ ಮಾಡುವರೆಂಬುದು ಸತ್ಯ. ಕಾದು ನೋಡೋಣ.