ಮಂಗಳೂರು: ಮಂಡ್ಯದಲ್ಲಿ ನಾಲೆಗೆ ಉರುಳಿದ ‘ರಾಜಕುಮಾರ್’ ಹೆಸರಿನ ಖಾಸಗಿ ಬಸ್ ಬರೋಬ್ಬರಿ 15 ವರ್ಷ ಮಂಗಳೂರು ನಗರದಲ್ಲಿಯೇ ಓಡಾಡಿದ್ದು, 15 ವರ್ಷ ಮೇಲ್ಪಟ್ಟಿದ್ದರಿಂದ ಪರ್ಮಿಟ್ ಅನ್ನು ರದ್ದುಪಡಿಸಲಾಗಿತ್ತು ಎಂಬ ಮಾಹಿತಿ ಸಾರಿಗೆ ಇಲಾಖೆಯಿಂದ ತಿಳಿದು ಬಂದಿದೆ.
ಈ ಬಸ್ ಈವರೆಗೆ ಎಂಟು ಬಾರಿ ಮಾರಾಟವಾಗಿದೆ. ಶಾಂಭವಿ ಗುಜರಾನ್ ಎಂಬವರ ಹೆಸರಲ್ಲಿದ್ದ ಈ ಬಸ್ ಅನ್ನು ಮಂಡ್ಯದ ಶ್ರೀನಿವಾಸ್ ಎಂಬುವವರಿಗೆ 2015ರ ಏಪ್ರಿಲ್ 1ರಂದು ಮಾರಾಟ ಮಾಡಲಾಗಿತ್ತು. 2001ರ ಜೂನ್ 1ರಂದು ಶಂಕರ ವಿಠಲ ಮೋಟಾರ್ ಕಂಪನಿ ಹೆಸರಲ್ಲಿ ಕೆಎ– 19 ಎ 5676 ಸಂಖ್ಯೆಯಲ್ಲಿ ಮೊದಲ ನೋಂದಣಿ ಆಗಿತ್ತು.
ಬಳಿಕ ಮಂಗಳೂರಿನಲ್ಲೇ ಎಂಟು ಮಾಲೀಕರನ್ನು ಕಂಡಿತ್ತು. ಕೊನೆಯದಾಗಿ ರೂಟ್ ನಂಬರ್ 16 ರಲ್ಲಿ ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ಮಾರ್ಗದಲ್ಲಿ ಈ ಬಸ್ ಸಂಚಾರ ನಡೆಸಿತ್ತು. ಬಸ್ಗೆ 15 ವರ್ಷ ಮೇಲ್ಪಟ್ಟ ಕಾರಣ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಪರ್ಮಿಟ್ ರದ್ದುಪಡಿಸಲಾಗಿತ್ತು ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಬಿ. ಮಿಸ್ಕಿತ್ ತಿಳಿಸಿದ್ದಾರೆ.