ಬೆಳಗಾವಿ: ‘ಒದಿಯಬೇಕು ನಿಮ್ಮನ್ನು... ಜಾಡಿಸಿ ಒದೆಯಬೇಕು ನಿಮ್ಮನ್ನು... ಅತಿಯಾಯ್ತು ನಿಮ್ದು... ಹುಚ್ಚರು ಇದ್ದೀರಿ ನೀವು...’ ಎಂದು ಶಾಸಕ ರಮೇಶ ಜಾರಕಿಹೊಳಿ ಗುರುವಾರ ಬೆಳಿಗ್ಗೆ ಗೋಕಾಕದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರ ಮೇಲೆ ಹರಿಹಾಯ್ದರು.
ಕಳೆದ 9–10 ದಿನಗಳಿಂದ ‘ಕಣ್ಮರೆ’ಯಾಗಿದ್ದ ರಮೇಶ ಅವರು ಗೋಕಾಕದ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ಕಳೆದಿದ್ದರು. ಬೆಳಿಗ್ಗೆ ಬ್ಯಾಡ್ಮಿಂಟನ್ ಆಟವಾಡಿ ಮನೆಗೆ ವಾಪಸ್ಸಾದರು.
ಆಗ ಟಿ.ವಿ ಮಾಧ್ಯಮ ವರದಿಗಾರರು ಮಾತನಾಡಿಸಲು ಅವರ ಬಳಿ ತೆರಳುತ್ತಿದ್ದಂತೆ, ‘ನಿಮ್ಮನ್ನು ಜಾಡಿಸಿ ಒದೆಯಬೇಕು...’ ಎನ್ನುತ್ತಾ ಕಾರಿನಿಂದ ಇಳಿದು ನೇರವಾಗಿ ಮನೆಯೊಳಗೆ ನಡೆದುಕೊಂಡು ಹೋದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
‘ಕೈ’ ತ್ಯಜಿಸಲು ರಮೇಶ ನಿರ್ಧಾರ?
ಬೆಂಗಳೂರು: ‘ಸಂಪುಟದಿಂದ ಸ್ಥಾನ ಕಳೆದುಕೊಂಡ ಕಾರಣಕ್ಕೆ ಮುನಿಸಿಕೊಂಡಿರುವ ರಮೇಶ ಜಾರಕಿಹೊಳಿ ಪಕ್ಷದಲ್ಲಿ ಉಳಿಯು ವುದು ಅನುಮಾನ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿನೇಶ್ ಅವರನ್ನು ಗುರುವಾರ ಭೇಟಿ ಮಾಡಿ ಅರ್ಧಗಂಟೆ ಚರ್ಚೆ ನಡೆಸಿದ ಸತೀಶ ಜಾರಕಿಹೊಳಿ, ಪಕ್ಷ ತ್ಯಜಿಸಲು ರಮೇಶ ನಿರ್ಧರಿಸಿರುವ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಗೊತ್ತಾಗಿದೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ದಿನೇಶ್, ‘ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಯಸುವುದಾದರೆ ಪಕ್ಷದ ಹೈಕಮಾಂಡ್ ಜೊತೆ ರಮೇಶ ಮಾತನಾಡಬೇಕು. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತನಾಡುವಂತೆ ಸಲಹೆ ನೀಡಿದ್ದೇನೆ’ ಎಂದರು.
‘ನಾನು ಮತ್ತು ರಮೇಶ ಒಂದೇ ಸಮಯದಲ್ಲಿ ರಾಜಕೀಯಕ್ಕೆ ಬಂದವರು. ರಮೇಶ ಅವರು ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಏನೇ ಸಮಸ್ಯೆಗಳಿದ್ದರೂ ಚರ್ಚಿಸಲು ವೇದಿಕೆ ಇದೆ’ ಎಂದರು.