ಸಿಂದಗಿ: ‘ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಪಾಲು ಕೇಳಲು ಅದೇನು ಮನೆ ಆಸ್ತೀನಾ? ಸಚಿವನಾಗೋದರಲ್ಲಿ ಏನೂ ಅರ್ಥವಿಲ್ಲ. ಅದನ್ನು ತಲೆಯಲ್ಲಿ ಇಟ್ಟುಕೊಂಡಿಲ್ಲ. ಜನರ ಸೇವೆ ಮಾಡುವುದಷ್ಟೇ ನನ್ನ ಕೆಲಸ’ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಭಾನುವಾರ ಸಂಜೆ ಸಿಂದಗಿಯಲ್ಲಿ ಬಿಜೆಪಿ ಮಂಡಲ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮಿಸಬೇಕಿದೆ. ಈಗಾಗಲೇ ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀಶೇಡಬಾಳ ರೈಲು ಮಾರ್ಗವನ್ನು ಸಿಂದಗಿ ಮಾರ್ಗವಾಗಿ ವಾಡಿಯವರೆಗೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವೆ’ ಎಂದು ಹೇಳಿದರು.
‘ನನ್ನ 45 ವರ್ಷದ ರಾಜಕೀಯದ ತತ್ವ ಇಷ್ಟೇ, ಎಲ್ಲರನ್ನೂ ಸಮದೃಷ್ಟಿಯಿಂದ ನೋಡಬೇಕು. ಇದು ನನ್ನ ರಾಜಕೀಯ ಗುರುಗಳಾದ ಜೆ.ಎಚ್.ಪಟೇಲ, ರಾಮಕೃಷ್ಣ ಹೆಗಡೆ ಅವರಿಂದ ಕಲಿತ ರಾಜಕಾರಣ ಇದು’ ಎಂದರು.