ಬೆಳಗಾವಿ: ‘ಶಾಸಕರಾದ ರಮೇಶ ಜಾರಕಿಹೊಳಿ, ನಾಗೇಂದ್ರ ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಬಿಜೆಪಿಯವರು ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶ ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ. ನನ್ನ ಮೇಲೆ ಅವರಿಗೇನೂ ಕೋಪವಿಲ್ಲ. ನನ್ನ ಜೊತೆಗೆ ಆತ್ಮೀಯರಾಗಿದ್ದಾರೆ. ಫೋನ್ ಸಂಪರ್ಕಕ್ಕೆ ಸಿಕ್ಕ ತಕ್ಷಣ ಮಾತನಾಡುವೆ’ ಎಂದರು.
‘ಬಿಜೆಪಿಯವರಿಗೆ ಕಾಂತ್ರಿಯ ಬಗ್ಗೆ ಏನ್ ಗೊತ್ತು. ಅವರು ಯಾವತ್ತಾದರೂ ಕ್ರಾಂತಿ ಮಾಡಿದ್ದಾರಾ? ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲದವರು, ಈಗೇನು ಕ್ರಾಂತಿ ಮಾಡ್ತಾರೆ. ಅಧಿಕಾರಕ್ಕಾಗಿ ಬಿಜೆಪಿಯವರು ಹಾಗೆ ಹೇಳುತ್ತಿದ್ದಾರೆ’ ಎಂದು ಹೇಳಿದರು.
‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಟಿಕೆಟ್ ಹಂಚಿಕೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ಯೋಚಿಸಿ, ಹಂಚಿಕೆ ಮಾಡುತ್ತೇವೆ’ ಎಂದು ತಿಳಿಸಿದರು.