ಭುವನೇಶ್ವರ: ಎಂಜಿನ್ ಇಲ್ಲದೇ ಎಕ್ಸ್ಪ್ರೆಸ್ ರೈಲಿನ 22 ಬೋಗಿಗಳು 10 ಕಿಲೋ ಮೀಟರ್ ಚಲಿಸಿದ ಪ್ರಕರಣದಲ್ಲಿ 7ಸಿಬ್ಬಂದಿಯನ್ನು ಭಾನುವಾರ ಅಮಾನತು ಮಾಡಲಾಗಿದೆ.
ಈ ಘಟನೆಗೆ ಸಿಬ್ಬಂದಿಯ ಕರ್ತವ್ಯಲೋಪ ಕಾರಣ ಎಂದು ರೈಲ್ವೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಾಲಂಗೀರ್ ಜಿಲ್ಲೆಯ ತಿತ್ಲಾಗರ್ ರೈಲು ನಿಲ್ದಾಣದಲ್ಲಿ ಅಹಮದಾಬಾದ್– ಪುರಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಬದಲಿಸುವ ವೇಳೆ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಹಳಿ ಮೇಲೆ ಸಾಗುತ್ತಿದ್ದ ರೈಲಿನ ಗಾಲಿಗಳಿಗೆ ಕಲ್ಲುಗಳನ್ನು ಅಡ್ಡವಿಟ್ಟು ತಡೆದು ನಿಲ್ಲಿಸಲಾಗಿತ್ತು. ಎಂಜಿನ್ ಅನ್ನು ಬೋಗಿಯಿಂದ ಪ್ರತ್ಯೇಕಿಸಿದಾಗ ಹಳಿ ಇಳಿಜಾರಿನಲ್ಲಿ ಇದ್ದುದರಿಂದ ಸಾಕಷ್ಟು ದೂರ ರೈಲು ಸಾಗಿತ್ತು. ಗಾಲಿಗಳಿಗೆ ಸ್ಕಿಡ್ ಬ್ರೇಕ್ ಹಾಕದೇ ಇದ್ದುದೇ ರೈಲು ಚಲಿಸಲು ಕಾರಣವಾಗಿದೆ.
‘ಇಬ್ಬರು ಎಂಜಿನ್ ಚಾಲಕರು, 3 ಮೆಕ್ಯಾನಿಕ್, 2 ನಿರ್ವಹಣಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಪೂರ್ವ ಕರಾವಳಿ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.