ಬೆಂಗಳೂರು: ‘postcardkannada.com’ ವೆಬ್ಸೈಟ್ ಮಾಲೀಕರು ನನ್ನ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನಟ ಪ್ರಕಾಶ್ ರೈ ಬುಧವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಮಾನ ಇಲ್ಲದವನಿಂದ ಮಾನನಷ್ಟ ಮೊಕದ್ದಮೆ ದಾಖಲು...! ಎನ್ನುವ ತಲೆಬರಹದಡಿಯಲ್ಲಿ ವೆಬ್ಸೈಟ್ನಲ್ಲಿ ಲೇಖನ ಪ್ರಕಟವಾಗಿದ್ದು, ಮಗ ಸತ್ತಾಗ ಕಣ್ಣೀರು ಸುರಿಸದೆ ಡಾನ್ಸ್ರ್ ಜತೆ ಓಡಿ ಹೋಗಿದ್ದರು ಎಂದು ಬರೆದಿದ್ದಾರೆ. ಇದರಿಂದ ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ’ ಎಂದು ರೈ ದೂರಿನಲ್ಲಿ ತಿಳಿಸಿದ್ದಾರೆ.
‘ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದನ್ನು ಉಲ್ಲೇಖಿಸಿ ಪ್ರಕಟಿಸಿರುವ ಲೇಖನದಲ್ಲಿ ಗೌರಿ ಹತ್ಯೆ ಬಗ್ಗೆಯೂ ಪ್ರಸ್ತಾಪಿಸಿರುವುದು ನೋವಾಗಿದೆ’ ಎಂದು ಹೇಳಿದ್ದಾರೆ. ದೂರಿನ ಅನ್ವಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವೆಬ್ಸೈಟ್ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.