ಬೆಂಗಳೂರು: ‘ಚಿಂಚೋಳಿ ಶಾಸಕ ಉಮೇಶ ಜಾಧವ ಅವರು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿ ಕಲಬುರ್ಗಿಯ ವಿವಿಧ ಸಂಘಟನೆಗಳು ವಿಧಾನಸಭಾಧ್ಯಕ್ಷರಿಗೆ ಸೋಮವಾರ ಮನವಿ ಸಲ್ಲಿಸಿವೆ.
‘ಜಾಧವ ಅವರು ತಮ್ಮ ನೈತಿಕತೆ ತೊರೆದು ಬಿಜೆಪಿ ಸೇರಿದ್ದಾರೆ. ವೈಯಕ್ತಿಕ ಹಿತ, ಹಣ ಮತ್ತು ಅಧಿಕಾರ ಆಸೆಯಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಹೊರತು ಅಭಿವೃದ್ಧಿ ದೃಷ್ಟಿಯಿಂದ ಅಲ್ಲ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಶಾಸಕರಾಗಿ ಆಯ್ಕೆಯಾದ ಅವರು ಜನರ ವಿಶ್ವಾಸಕ್ಕೆ ಚ್ಯುತಿ ತಂದಿದ್ದಾರೆ. ಅಂಥವರು ಸಂಸದರಾದರೂ ಯಾವುದೇ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ಆಯ್ಕೆ ಮಾಡಿದವರಿಗೆ ನಿಷೇಧಿಸುವ ಅವಕಾಶವೂ ಇದೆ. ಹೀಗಾಗಿ, ಜಾಧವ ಅವರನ್ನು ಅನರ್ಹಗೊಳಿಸಬೇಕು’ ಎಂದೂ ಸಂಘಟನೆಗಳು ಒತ್ತಾಯಿಸಿವೆ.
ವಿಶ್ವಭಾರತಿ ಎಜುಕೇಷನ್ ಸೊಸೈಟಿ, ನಿಯೋಜಿತ ಗೃಹಿಣಿ ಮಹಿಳಾ ಸಹಕಾರಿ ಸಂಘ, ನಮಲ್ ಸೊಸೈಟಿ, ಮಲ್ಲಿಕಾರ್ಜುನ ಗ್ರಾಮೀಣ ಅಭಿವೃದ್ಧಿ ಸ್ವಯಂಸೇವಾ ಸಂಸ್ಥೆ, ವಿಷನ್ ಇಂಡಿಯಾ, ಜ್ಞಾನಜ್ಯೋತಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮುಂತಾದ ಸಂಘಟನೆಗಳು ಈ ಮನವಿ ಸಲ್ಲಿಸಿವೆ.