ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿನ ಕಡಲಲ್ಲಿ ನೆನಪುಗಳ ದೋಣಿ

ಅಂಬರೀಷ್‌ಗೆ ಚಿತ್ರೋದ್ಯಮದ ಶ್ರದ್ಧಾಂಜಲಿ: ನಾಡಿನ ಮಗನಾಗಿದ್ದರು ಎಂದ ಸುಮಲತಾ
Last Updated 30 ನವೆಂಬರ್ 2018, 20:28 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ನೆರೆದವರೆಲ್ಲ ಮಾತನ್ನೇ ಮರೆತವರಂತೆ ಮೌನವನ್ನು ತಬ್ಬಿದ್ದರು. ಭಾರವಾದ ಹೃದಯವನ್ನು ಹೊತ್ತು ಕುಳಿತಿದ್ದರು. ಅಳುವನ್ನು ಒಳಗೆ ಅವಿತಿಸಿಟ್ಟುಕೊಂಡು ವಿಷಾದದ ನಗು ಬೀರುತ್ತಿದ್ದರು.

ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮ ಶುಕ್ರವಾರ ಏರ್ಪಡಿಸಿದ್ದ ‘ಅಂಬಿ’ಗೆ ನಮನ ಕಾರ್ಯಕ್ರಮದಲ್ಲಿ ನೋವಿನ ಕಡಲಲ್ಲಿ ನೆನಪುಗಳ ದೋಣಿಯೇ ತೇಲುತ್ತಿತ್ತು.

ಏನೆಂದು ಬಣ್ಣಿಸಲಿ ಅವರ?:‘ನನ್ನ ಅಂಬರೀಷ್ ಕೇವಲ ನನ್ನವರಾಗಿ ಉಳಿಯದೆ, ನಾಡಿನ ಮಗನಾಗಿದ್ದವರು. ಅರಸನಾಗಿ ಬಾಳಿ, ಅರಸನಾಗಿಯೇ ಹೊರಟು ಹೋದರು. ಅವರನ್ನು ಸ್ನೇಹಿತ ಎನ್ನಲೆ, ಪತಿ ಎನ್ನಲೆ, ಬಾಳ ಸಂಗಾತಿ ಎನ್ನಲೆ...’ ಎನ್ನುತ್ತ ಗಂಟಲು ಬಿಗಿದು, ಅಳು ಉಮ್ಮಳಿಸಿ ಬರುತ್ತಿದ್ದರೂ ಭಾರವಾದ ಹೃದಯದಿಂದಲೇ ಅಂಬರೀಷ್‌ ಅವರ ಪತ್ನಿ ಸುಮಲತಾ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟರು.

‘ಪುತ್ರ ಅಭಿಷೇಕ್‌ನ ಮೊದಲ‌ ಚಿತ್ರ ನೋಡಬೇಕೆನ್ನುವುದು ಅಂಬರೀಷ್‌ ಅವರ ಆಸೆಯಾಗಿತ್ತು. ಆದರೆ, ಆ ಆಸೆ ಈಡೇರಲಿಲ್ಲ. ಮಗನ ಮೇಲೂ ನಾಡಿನ ಜನತೆಯ ಆಶೀರ್ವಾದ ಇರಲಿ’ ಎಂದು ಆಶಿಸಿದರು.

‘ಜವರಾಯ ಮತ್ತು ಅಂಬರೀಷ್ ಅವರ ನಡುವೆ ಒಂದು ಬಗೆಯ ಹೋರಾಟವೇ ನಡೆದಿತ್ತೇನೊ. ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಷ್‌ ಅವರನ್ನುಜವರಾಯ ಕರೆದುಕೊಂಡು ಹೋಗಲು ಬಂದಾಗ, ನಾನು ಅಷ್ಟು ಸುಲಭವಾಗಿ ನಿನ್ನ ಕೈಗೆ ಸಿಗುವುದಿಲ್ಲ, ನಡೆಆಚೆಗೆ ಎನ್ನುತ್ತಿದ್ದರು. ಹಾಗಾಗಿ, ಅನಾರೋಗ್ಯದ ನಡುವೆಯೂ ಹಲವು ವರ್ಷ ಬಾಳಿದರು. ಆದರೆ, ಕೊನೆಗೆ ಜವರಾಯ ನನ್ನನ್ನು ಯಾರಿಂದಲೂ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತ ‌ಅವರನ್ನೂ ಕರೆದುಕೊಂಡು ಹೋಗಿಬಿಟ್ಟ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ತೆಲುಗು ಚಿತ್ರ‌ನಟ ಪ್ರಭಾಸ್ ನಟನೆ ಮಾಡಿರುವ ‘ರೆಬೆಲ್’ ಸಿನಿಮಾದ ಹಕ್ಕುಗಳನ್ನು ಪಡೆದು, ನನ್ನ ಪುತ್ರ ನಿಖಿಲ್ ಹಾಗೂ ಅಂಬರೀಷ್ ಅವರನ್ನು ಸೇರಿಸಿಕೊಂಡು ಕನ್ನಡದಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದೆ. ಇದಕ್ಕಾಗಿ ಸಿನಿಮಾದ ಹಕ್ಕುಗಳನ್ನೂ ಪಡೆದಿದ್ದೆ. ಆದರೆ, ಒತ್ತಡದಲ್ಲಿ ಅದು ಸಾಧ್ಯವಾಗಲೇ ಇಲ್ಲ’ ಎಂದು ವ್ಯಥೆಪಟ್ಟರು.

‘ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡಕ್ಕೆ ಅಂಬರೀಷ್‌ ಅವರ ಹೆಸರನ್ನಿಟ್ಟು, ಅವರ ಪುತ್ಥಳಿ ನಿರ್ಮಾಣ ಮಾಡಬೇಕು’ ಎಂದು ಹಿರಿಯ ನಟಿ ಬಿ.ಸರೋಜಾದೇವಿ ಒತ್ತಾಯಿಸಿದರು.

ಹಿರಿಯ ನಟಿ ಜಯಂತಿ,ಪ್ರೇಮಾ, ನಟರಾದ ದೊಡ್ಡಣ್ಣ, ರಾಮಕೃಷ್ಣ,ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಟಿ.ಎಸ್‌.ನಾಗಾಭರಣ, ರಾಕ್‌ಲೈನ್‌ ವೆಂಕಟೇಶ್‌, ಶ್ರೀಮುರುಳಿ ಸೇರಿದಂತೆ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಬಂದಿದ್ದರು.

‘ಚಿತ್ರನಗರಿಗೆ ಅಂಬಿ ಹೆಸರು’

‘ಅಂಬರೀಷ್ ಅವರ ಆಸೆಯಂತೆ ಮೈಸೂರಿನಲ್ಲಿ ‘ಚಿತ್ರ ನಗರಿ’ ನಿರ್ಮಾಣವಾಗಬೇಕು. ಅದಕ್ಕೆ ಅಂಬರೀಷ್ ಅವರ ಹೆಸರನ್ನೇ ಇಡಬೇಕು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ‘ ಸಿದ್ದರಾಮಣ್ಣ ಅವರು ಹೇಳಿದ ಮೇಲೆ ಎರಡು ಮಾತಿಲ್ಲ. ಖಂಡಿತ ನಿರ್ಮಾಣ ಮಾಡುತ್ತೇವೆ. ಇದರ ಜತೆಗೆರಾಮನಗರದಲ್ಲಿ ಸಿನಿಮಾ ವಿಶ್ವವಿದ್ಯಾಲಯವನ್ನೂ ನಿರ್ಮಾಣ ಮಾಡುವ ಉದ್ದೇಶ ಸರ್ಕಾರಕ್ಕಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT