ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜೀನಾಮೆ ಕೊಡುವೆ: ಸದ್ಯ ಕೊಡೊಲ್ಲ’ ಮಾತು ಬದಲಿಸಿದ ರಮೇಶ ಜಾರಕಿಹೊಳಿ

Last Updated 24 ಏಪ್ರಿಲ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬೆಳಿಗ್ಗೆ ಗೋಕಾಕದಲ್ಲಿ ಹೇಳಿದ್ದ ರಮೇಶ ಜಾರಕಿಹೊಳಿ, ಸಂಜೆ ಹೊತ್ತಿಗೆ ರಾಜಧಾನಿ ತಲುಪುತ್ತಿದ್ದಂತೆ ಮಾತು ಬದಲಿಸಿದರು.

ತಮ್ಮ ಸೋದರ, ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ‘ಬೆಂಗಳೂರಿಗೆ ಹೋಗುತ್ತಿದ್ದಂತೆ ರಾಜೀನಾಮೆ ಕೊಡುತ್ತೇನೆ’ ಎಂದು ಪ್ರಕಟಿಸಿದ್ದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ರಾಜೀನಾಮೆ ಕೊಡುವುದು ಸತ್ಯ. ಆದರೆ, ಒಬ್ಬನೇ ಕೊಟ್ಟರೆ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾಗಿ ನೀಡೋಣವೆಂದು ಕೆಲವರು ಸಲಹೆ ನೀಡಿದ್ದರು. ಅದಕ್ಕಾಗಿ ಇಷ್ಟು ದಿನಗಳವರೆಗೆ ಕಾದೆ. ಅತೃಪ್ತ ಶಾಸಕರೆಲ್ಲರೂ ಒಟ್ಟಾಗಿ ಸೇರಿ, ಯಾವತ್ತು ರಾಜೀನಾಮೆ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ’ ಎಂದು ಹೇಳಿದರು.

ಜಾರಕಿಹೊಳಿ ನಡೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ‘ಪಕ್ಷವು ಶಾಸಕ, ಸಚಿವ ಸ್ಥಾನ ಎಲ್ಲವನ್ನೂ ಅವರಿಗೆ ನೀಡಿದೆ. ಅವರಿಗೆ ಉಸಿರುಕಟ್ಟುವಂತೆ ಏನಾಗಿದೆಯೋ ಗೊತ್ತಿಲ್ಲ. ಭಗವಂತ ಅವರ ಆಸೆ ಈಡೇರುವಂತೆ ಮಾಡಲಿ. ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದ್ದರು.

ಇದಕ್ಕೆ ಏಕವಚನದಲ್ಲೇ ತಿರುಗೇಟು ಕೊಟ್ಟ ರಮೇಶ ಜಾರಕಿಹೊಳಿ, ‘ಅವನು (ಶಿವಕುಮಾರ್‌) ನನ್ನ ಲೆವಲ್ ಅಲ್ಲ. ಅವನು ತನಗೆ ತಿಳಿದಂತೆ ಹೇಳುತ್ತಾನಷ್ಟೆ. ನಮ್ಮ ಲೀಡರ್ ಏನಿದ್ದರೂ ರಾಹುಲ್ ಗಾಂಧಿ. ಅವರ ಜತೆ ಮಾತನಾಡಿ ಮುಂದಿನ ತೀರ್ಮಾನ ’ ಎಂದೂ ಹೇಳಿದರು.

‘ಸತೀಶ ಸಂಪೂರ್ಣವಾಗಿ ಹತಾಶರಾಗಿದ್ದಾರೆ. ಸೋಲು ಒಪ್ಪಿಕೊಂಡಿದ್ದಾರೆ. ಅವರ ಕತೆ ಮುಗಿದಿದೆ’ ಎಂದರು.

ಯಮಕನಮರಡಿಯಲ್ಲಿ ಸ್ಪರ್ಧೆ: ‘ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಗೋಕಾಕದಲ್ಲಿ ನಡೆಯುವ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರವನ್ನು ಇನ್ನೊಬ್ಬ ಸಹೋದರ ಲಖನ್‌ ಜಾರಕಿಹೊಳಿಗೆ ಬಿಟ್ಟುಕೊಡುತ್ತೇನೆ. ಯಮಕನಮರಡಿ ಕ್ಷೇತ್ರದಿಂದ (ಸತೀಶ ಅವರ ಕ್ಷೇತ್ರ) ಸ್ಪರ್ಧಿಸುತ್ತೇನೆ’ ಎಂದೂ ರಮೇಶ ಹೇಳಿದರು.

ಬದ್ಧತೆ ಇಲ್ಲದ ರಮೇಶ: ‘ಪಿಎಲ್‌ಡಿ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದಿತ್ತು. ಹೊರ ಜಿಲ್ಲೆಯವರ ಪ್ರವೇಶವನ್ನು ತಡೆಯುವುದಕ್ಕಾಗಿ ಭಿನ್ನಮತವನ್ನು ಸ್ಥಗಿತಗೊಳಿಸಿದ್ದೆ. ಆದರೆ, ರಮೇಶ ಮುಂದುವರಿಸಿದರು. ಅವನಿಗೆ ರಾಜಕೀಯ ಬದ್ಧತೆ ಇಲ್ಲ’ ಎಂದು ಸತೀಶ ಜಾರಕಿಹೊಳಿ ಹಂಗಿಸಿದರು.

**

‘ಭಿನ್ನಮತ ಆರಂಭಿಸಿದ್ದೇ ಸತೀಶ’

‘ಭಿನ್ನಮತ ಆರಂಭಿಸಲು ಹಚ್ಚಿದ್ದೇ ಸಹೋದರ ಸತೀಶ ಜಾರಕಿಹೊಳಿ. ಅವರ ಗೋ ಮುಖವನ್ನು ನೋಡಿ ಮೋಸ ಹೋದೆ. ಅವರೇ ನನಗೆ ಮೋಸ ಮಾಡಿದರು. ಅವರನ್ನು ಬಿಟ್ಟು ಬೇರಾರೂ ಮಾಡಿಲ್ಲ. ಬೇಕಿದ್ದರೆ ಡಾ.ಸುಧಾಕರ (ಚಿಕ್ಕಬಳ್ಳಾಪುರ ಶಾಸಕ) ಅವರನ್ನು ಕೇಳಿ ನೋಡಿ’ ಎಂದು ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಸಚಿವನಾಗಿ ಆರಾಮಾಗಿದ್ದೆ. ನನಗೆ ಇದರ ಜರೂರತ್ತು ಇರಲಿಲ್ಲ. ಆಗ ಮನೆಗೆ ಅಳುತ್ತ ಬಂದ ಸತೀಶ, ನನ್ನನ್ನು ಎತ್ತಿಕಟ್ಟಿದರು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಅವನ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನೊಬ್ಬ ಅಪ್ಪಟ ಸುಳ್ಳುಗಾರ. ಅಳುಬುರುಕ. ಕಣ್ಣೀರು ಹಾಕುವ ಜಾಯಮಾನದವನು. ಭಿನ್ನಮತ ಮಾಡುವಂತೆ ನಾನು ಹೇಳಿಲ್ಲ’ ಎಂದು ಅಣ್ಣನ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

**

ರಮೇಶ ಏನನ್ನೋ ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೀಗಾಡುತ್ತಿದ್ದಾರೆ. ಅದೇನು ಎಂದು ಅವರನ್ನೇ ಕೇಳಿನೋಡಿ
- ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT