ರಾಮನಗರ: ‘ಆನಂದ್ ಸಿಂಗ್ ನನ್ನ ಅಣ್ಣ ಇದ್ದ ಹಾಗೆ. ಅವರ ಮೇಲೆ ನಾನು ಹಲ್ಲೆ ನಡೆಸಿಲ್ಲ’ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸ್ಪಷ್ಟನೆ ನೀಡಿದರು.
ಈಗಲ್ಟನ್ ರೆಸಾರ್ಟ್ನ ಹೊರಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆನಂದ್ ಸಿಂಗ್ ಮತ್ತು ಭೀಮಾ ನಾಯ್ಕ ನಡುವಿನ ಮನಸ್ಥಾಪ ಬಗೆಹರಿಸಲು ಮಾತುಕತೆ ನಡೆದಿತ್ತು. ಈ ಸಂದರ್ಭ ಸಣ್ಣ ಘಟನೆ ನಡೆಯಿತು. ಆದರೆ ಮಾಧ್ಯಮಗಳಲ್ಲಿ ಬಂದಿರುವಂತೆ ಬಿಯರ್ ಬಾಟಲಿಯಿಂದ ಹೊಡೆದಿಲ್ಲ. ನನ್ನ ಗನ್ ಮ್ಯಾನ್ಗೂ ಕಚ್ಚಿಲ್ಲ’ ಎಂದರು.
‘ಘಟನೆಯಿಂದ ಆನಂದ್ ಕುಟುಂಬದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.
ಕಾಂಗ್ರೆಸ್ ರೆಸಾರ್ಟ್ ರಾಜಕಾರಣಕ್ಕೆ ತೆರೆ
ರಾಮನಗರದಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ ಅಂತ್ಯಗೊಂಡಿದ್ದು, ಒಬ್ಬೊಬ್ಬರಾಗಿ ತೆರಳುತ್ತಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಧಾವಿಸಿದ್ದು, ಎಲ್ಲ ಶಾಸಕರು ರೆಸಾರ್ಟ್ ಬಿಟ್ಟು ಹೊರಡುವಂತೆ ಸೂಚಿಸಿದರು. ಬಳಿಕ ಒಬ್ಬೊಬ್ಬರಾಗಿ ಕಾರುಗಳಲ್ಲಿ ರೆಸಾರ್ಟ್ನಿಂದ ಹೊರಟರು.
‘ಇಂದು ನಡೆಯಬೇಕಿದ್ದ ಸಭೆಯು ಕಾರಣಾಂತರಗಳಿಂದ ರದ್ದಾಗಿದೆ. ಹೀಗಾಗಿ ಇಲ್ಲಿಂದ ಹೊರಟಿದ್ದೇವೆ’ ಎಂದು ಶಾಸಕ ರಾಮಲಿಂಗ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.