ಪ್ರತಿ ವರ್ಷ ರಥೋತ್ಸವದ ಸಂದರ್ಭದಲ್ಲಿಯೇ ಬಸವೇಶ್ವರರ ಅಗ್ನಿಕೊಂಡವು ನಡೆಯುತ್ತಾ ಬಂದಿದೆ. ಈ ವರ್ಷ ಕೊಂಡ ಹಾಯುವ ಸ್ಥಳಕ್ಕೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಸುತ್ತಲಿನ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿಂದೆ 60 ಅಡಿ ಉದ್ದದ ಕೊಂಡ ನಿರ್ಮಿಸಲಾಗುತಿತ್ತು. ಕಳೆದ ವರ್ಷ ಕೊಂಡ ಹಾಯುವ ವೇಳೆ ವಿಜಯ್ಕುಮಾರ್ ಎಂಬ ಅರ್ಚಕರು ಬಿದ್ದು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೊಂಡದ ಉದ್ದವನ್ನು ತಗ್ಗಿಸುವಂತೆ ಅರ್ಚಕ ಸಮುದಾಯವು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ ಜಿಲ್ಲಾಡಳಿತವು 60 ಅಡಿಗೆ ಬದಲಾಗಿ 15 ಅಡಿ ಉದ್ದದ ಕೊಂಡ ನಿರ್ಮಿಸಿತ್ತು. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಹಿಂದಿನ ಮಾದರಿಯಲ್ಲಿಯೇ ಕೊಂಡ ನಿರ್ಮಿಸಲು ಆಗ್ರಹಿಸಿ ಕಾರ್ಯಕ್ರಮ ಬಹಿಷ್ಕರಿಸಿದರು. ಹೀಗಾಗಿ ಶನಿವಾರ ಮುಂಜಾನೆ ಕೊಂಡೋತ್ಸವ ನಡೆಯಲಿಲ್ಲ.