ಬೆಂಗಳೂರು:ನಟಿ ಸುಮಲತಾ ಅವರ ಕುರಿತು ಸಚಿವ ಎಚ್.ಡಿ. ರೇವಣ್ಣ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ‘ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ನಾನೇ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.
‘ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಕುಟುಂಬ. ರೇವಣ್ಣ ಹೇಳಿಕೆಯಿಂದ ಯಾರಿಗಾದ್ರು ನೋವಾಗಿದ್ರೆ ನಾನು ಅವರ ಕುಟುಂಬದ ಸದಸ್ಯನಾಗಿ ಕ್ಷಮೆ ಕೇಳುತ್ತೇನೆ’ ಎಂದು ಸಹೋದರನ ತಪ್ಪಿಗೆ ಸಿಎಂ ಕ್ಷಮೆ ಕೇಳಿದರು.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸೀಟು ಹಂಚಿಕೆ: ನಾಯಕರೇ ಮಾತನಾಡುತ್ತಾರೆ
ಲೋಕಸಭೆ ಚುನಾವಣೆಗೆ ಜೆಡಿಎಸ್–ಕಾಂಗ್ರೆಸ್ ಸೀಟು ಹಂಚಿಕೆ ಬಗ್ಗೆ ಎರಡು ಪಕ್ಷದ ನಾಯಕರೇ ಮಾತನಾಡುತ್ತಾರೆ. ಆ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದೇನೆ. ನನ್ನ ಸಮಯ ವ್ಯರ್ಥ ಮಾಡದೆ ರಾಜ್ಯದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ನಾಳೆ ಎಲೆಕ್ಸನ್ ಘೋಷಣೆ ಆಗಬಹುದು. ಆದಷ್ಟು ಬೇಗನೆ ಸೀಟು ಹಂಚಿಕೆ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮಂಗನ ಕಾಯಿಲೆ: ಆತಂಕ ಬೇಡ
ಮಲೆನಾಡಿನಲ್ಲಿ ಮಂಗನ ಕಾಯಿಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಮಂಗನ ಕಾಯಿಲೆ ಬಗ್ಗೆ ಜನರು ಭಯ, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.
ನವೆಂಬರ್ನಿಂದ ಮೇವರೆಗೂ ಆ ಕೀಟಗಳು ಕೋತಿ, ಮನುಷ್ಯರಿಗೆ ಕಚ್ಚಿದ್ರೆ ವೈರಸ್ ಹರಡುತ್ತದೆ. ಮಲೆನಾಡಿನ ಭಾಗದಲ್ಲಿ ಆ ಕೀಟಗಳು ಹೆಚ್ಚಾಗಿವೆ. ಔಷಧಿಯ ಕೊರತೆ ಇಲ್ಲ. ಅದಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಹೆಬ್ಬಾಳದಲ್ಲಿರುವ ಸಂಸ್ಥೆ ವ್ಯಾಕ್ಸಿನೇಷನ್ ತಯಾರು ಮಾಡುತ್ತದೆ. ಈಗಾಗಲೇ 1.20 ಲಕ್ಷ ವ್ಯಾಕ್ಸಿನೇಷನ್ ಕೊಡಲಾಗಿದೆ. ರೋಗಕ್ಕೆ ತುತ್ತಾದವರು 15 ದಿನಕ್ಕೊಮ್ಮೆ ಒಂದು ತಿಂಗಳಲ್ಲಿ ಎರಡು ಸಲ ತೆಗೆದುಕೊಳ್ಳುತ್ತಾರೆ. ನಂತರ ಬೂಸ್ಟರ್ ಬರುತ್ತೆ ಅದನ್ನ ತೆಗೆದುಕೊಂಡ್ರೇ ಕಂಪ್ಲೀಟ್ ವಾಸಿಯಾಗುತ್ತದೆ ಎಂದರು.
1762 ಶಂಕಿತ ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಿದ್ದಾಗ 250 ಪ್ರಕರಣಗಳು ಪಾಸಿಟೀವ್ ಇರುವುದು ಪತ್ತೆಯಾಗಿದೆ. ಮಂಗನ ಕಾಯಿಲೆಯಿಂದ 10 ಜನರು ಮೃತಪಟ್ಟಿದ್ದಾರೆ. ಸಾಗರದಲ್ಲಿ 6, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದರು.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.