ಶಕ್ತಿನಗರ (ರಾಯಚೂರು ಜಿಲ್ಲೆ): ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು,ಒಂದನೇ ವಿದ್ಯುತ್ ಘಟಕದ ಪರಿವರ್ತಕ ಸುಟ್ಟಿದೆ. ಇದರಿಂದ₹5 ಕೋಟಿ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
210 ಮೆಗಾವಾಟ್ ಸಾಮರ್ಥ್ಯದ (ಸ್ಟೇಷನ್ ಟ್ರಾನ್ಸ್ಫಾರ್ಮರ್) ವಿದ್ಯುತ್ ಪರಿವರ್ತಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಕೆಲಕಾಲ ಆರ್ಟಿಪಿಎಸ್ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.
ವಿಷಯ ತಿಳಿದ ವೈಟಿಪಿಎಸ್ ಮತ್ತು ಆರ್ಟಿಪಿಎಸ್ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು.
‘ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ತಿಳಿದಿಲ್ಲ. ತನಿಖೆ ನಡೆದಿದೆ’ ಎಂದು ಆರ್ಟಿಪಿಎಸ್ ಹಿರಿಯ ಎಂಜಿನಿಯರ್ ಮೋಯಿನುದ್ದೀನ್ ಖಾನ್ ತಿಳಿಸಿದರು.
ಭೇಟಿ: ಬೆಂಗಳೂರಿನ ತನಿಖಾ ತಂಡದವರು ಹಾಗೂಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ ಅವರು ಬುಧವಾರ ಆರ್ಟಿಪಿಎಸ್ಗೆ ಭೇಟಿ ನೀಡಲಿದ್ದಾರೆ.