ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ದೇಶೀಯವಾಗಿ ನಿರ್ಮಿಸಿದ ಮಾನವರಹಿತ ವೈಮಾನಿಕ ವಾಹನ ‘ರುಸ್ತುಂ–2’ ಪ್ರಯೋಗಾರ್ಥ ಹಾರಾಟ ಪ್ರತಿಕೂಲ ಹವಾಮಾನದಿಂದ ಬುಧವಾರ ರದ್ದಾಯಿತು.
ಶತ್ರು ನೆಲೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಡ್ರೋಣ್ ಮಾದರಿಯಲ್ಲಿ ರೂಪಿಸಿದ ‘ರುಸ್ತುಂ–2’ ಪ್ರಯೋಗಾರ್ಥ ಹಾರಾಟಕ್ಕೆ ಚಳ್ಳಕೆರೆಯ ಡಿಆರ್ಡಿಒ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬುಧವಾರ ಬೆಳಿಗ್ಗೆ 6.45ರಿಂದ 9.30ರವರೆಗೆ ನಿಗದಿತ ಸ್ಥಳಕ್ಕೆ ತೆರಳಿ, ವಾಯುನೆಲೆಗೆ ಮರಳಬೇಕಿತ್ತು.
ಹಾರಾಟಕ್ಕೆ ಸಿದ್ಧತೆ ಕೈಗೊಂಡಿದ್ದ ಸಮಯದಲ್ಲಿ ದಟ್ಟ ಮಂಜು ಆವರಿಸಿತ್ತು. ಪ್ರತಿಕೂಲ ಹವಾಮಾನದ ಪರಿಣಾಮ ಆವರಣದಲ್ಲಿ ಮಾತ್ರ ಹಾರಾಟ ನಡೆಸಿತು. ಮೊದಲ ಪ್ರಯೋಗಾರ್ಥ ಹಾರಾಟ ಇದೇ ಫೆ.25ರಂದು ಯಶಸ್ವಿಯಾಗಿತ್ತು.