ಮಡಿಕೇರಿ: ‘ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಗಳು ಎರಡು ಪುನರ್ವಸತಿ ಸ್ಥಳಗಳಲ್ಲಿ ಪೂರ್ಣವಾಗಿದ್ದು ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಹಸ್ತಾಂತರ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ತಾಲ್ಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಬುಧವಾರ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿ, ‘ಮೂಲಸೌಕರ್ಯ ಕೆಲಸ ಪೂರ್ಣವಾದ ಕೂಡಲೇ ಹಂತ ಹಂತವಾಗಿ ಮನೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.
‘ಸಂತ್ರಸ್ತರ ಮನೆ ಕಾಮಗಾರಿ ಕಳಪೆಯಾಗಿದೆ’ ನಟಿ ಹರ್ಷಿಕಾ ಪೂಣಚ್ಚ ಅವರ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ‘ದೇವರು ಆ ನಟಿಗೆ ಒಳ್ಳೆಯದು ಮಾಡಲಿ. ರಾಜೀವ್ ಗಾಂಧಿ ವಸತಿ ನಿಗಮದಿಂದ ಸರ್ಕಾರ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಗುಣಮಟ್ಟ ಚೆನ್ನಾಗಿದೆ’ ಎಂದು ತಿರುಗೇಟು ನೀಡಿದರು.
‘ಐಎಂಎ ವಂಚನೆ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ. ಅವರ ಅಮಾನತು ವಿಚಾರ ಪಕ್ಷದ ಚೌಕಟ್ಟಿನಲ್ಲಿ ನಡೆದಿದೆ’ ಎಂದು ಪ್ರಶ್ನೆಗೆ ಉತ್ತರಿಸಿದರು.
ಅಧಿಕಾರಿಗಳಿಗೆ ಸಚಿವರ ಕ್ಲಾಸ್:
‘ಅರಣ್ಯ ಪ್ರದೇಶದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಅಧಿಕಾರಿಗಳು ಮಾನವೀಯತೆ ತೋರಬೇಕು. ಅಡ್ಡಿ ಪಡಿಸಬಾರದು. ಅರಣ್ಯಾಧಿಕಾರಿಗಳನ್ನು ಜೈಲಿಗೆ ಕಳುಸುತ್ತೇವೆಂದು ಎಲ್ಲೂ ಹೇಳಿಲ್ಲ. ಕಾನೂನು ವ್ಯಾಪ್ತಿ ಜತೆಗೆ ಮಾನವೀಯತೆಯೂ ಇರಲಿ. ಅದನ್ನು ಬಿಟ್ಟು ಮರಗಳ್ಳರಿಗೆ ಬೆಂಬಲ ನೀಡಬಾರದು. ಮರಗಳ್ಳರಿಗೆ ಬೇಕಿದ್ದರೆ ಶೂಟ್ ಮಾಡಿ’ ಎಂದು ಬಳಿಕ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದರು.
ತೋಟದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡದ ವಿರಾಜಪೇಟೆ ಪ್ರೊಬೇಷನರಿ ತಹಶೀಲ್ದಾರ್ ಗೋವಿಂದರಾಜ್ಗೆ ತರಾಟೆ ತೆಗೆದುಕೊಂಡ ದೇಶಪಾಂಡೆ, ‘ನಿನ್ನನ್ನು ಅಮಾನತು ಮಾಡಬೇಕಾ ಅಥವಾ ವರ್ಗಾವಣೆ ಮಾಡಬೇಕಾ’ ಎಂದು ಖಡಕ್ ಆಗಿ ಹೇಳಿದರು.
‘ಶಾಸಕರ ಮಾತನ್ನೂ ಕೇಳುತ್ತಿಲ್ಲ. ಸಭೆಗೂ ಬರುತ್ತಿಲ್ಲ. ನಿನ್ನ ಮೇಲೆ ಸಾಕಷ್ಟು ದೂರುಗಳು ಬಂದಿವೆ. ನಾನು ಎಷ್ಟು ಒಳ್ಳೆಯ ಮನುಷ್ಯನೋ, ಅಷ್ಟೇ ಕೆಟ್ಟವನು. ಇನ್ಮುಂದೆ ದೂರು ಬರಬಾರದು. ಇನ್ನು ಮುಂದೆ ಸರಿಯಾಗಿ ಕೆಲಸ ಮಾಡಬೇಕು’ ಎಚ್ಚರಿಕೆ ನೀಡಿದರು.
ಎಫ್ಐಆರ್ಗೆ ಸೂಚನೆ:
ಮಾಲ್ದಾರೆ ವ್ಯಾಪ್ತಿಯ ಹಾಡಿಗಳಿಗೆ ವಿದ್ಯುತ್ ಮಾರ್ಗ ಎಳೆಯಲು ಡಿಸಿಎಫ್ ಮರಿಯಾ ಕ್ರಿಸ್ತರಾಜು ಅವರು ಅಡ್ಡಿ ಪಡಿಸುತ್ತಿದ್ದಾರೆಂಬ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಡಿಸಿಎಫ್ ಮೇಲೆ ಎಫ್ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ಪರಿಶೀಲಿಸಿ ಅನುಮತಿ ನೀಡುತ್ತೇನೆ ಎಂದು ಡಿಸಿಎಫ್ ಒಪ್ಪಿಕೊಂಡರು.
‘ತಾಂತ್ರಿಕ ತಜ್ಞರ ಸಲಹೆಯಂತೆ ಕೊಡಗಿನಲ್ಲಿ ಮನೆ ನಿರ್ಮಿಸಲು ಮಾತ್ರ ಕೆಲವು ಷರತ್ತಿನೊಂದಿಗೆ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿತ್ತು. ತಜ್ಞರು ಸಲಹೆ ನೀಡಿದಾಗ ನಿರ್ಲಕ್ಷ್ಯ ಮಾಡುವಂತಿಲ್ಲ. ಷರತ್ತುಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಶಾಸಕರು, ತಾಂತ್ರಿಕ ತಜ್ಞರ ಸಭೆ ಕರೆದು ಪುನರ್ ಪರಿಶೀಲಿಸಲಾಗುವುದು’ ಎಂದು ದೇಶಪಾಂಡೆ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.